ಬೆಂಗಳೂರಿನಲ್ಲಿ ನೆಲೆಯಿಲ್ಲದ15 ಬಡ ಕುಟುಂಬಗಳ ಎತ್ತಂಗಡಿ ಮಾಡಿದ ಪೋಲೀಸರು

ಬೆಂಗಳೂರು: ಬಲೂನ್ ಸೇರಿದಂತೆ ವಿವಧ ಅಟಿಕೆ ವಸ್ತುಗಳನ್ನು ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್ಗೇಟ್ ಮೆಟ್ರೋ ಕೆಳಗೆ ಟೆಂಟ್ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳನ್ನು ಪೋಲೀಸರು ಏಕಾಏಕಿ ಎತ್ತಂಗಡಿ ಮಾಡಿರುವುದರಿಂದ ಈ ಬಡ ಕುಟುಂಬಗಳು ದಿಕ್ಕುಕಾಣದೇ ನೆಲೆಗಾಗಿ ಅಲೆಯುತ್ತಿದ್ದಾರೆ. ಹತ್ತಾರು ಮಕ್ಕಳನ್ನು ಕಟ್ಟಿಕೊಂಡು ಉಳಿದುಕೊಳ್ಳಲು ಜಾಗ ಹುಡುಕಾಡುತ್ತಿದ್ದಾರೆ.
25 ಕ್ಕೂ ಹೆಚ್ಚು ಮಕ್ಕಳಿರುವ. ಈ ಕುಟುಂಬ ಮಕ್ಕಳು ಮತ್ತು ಹೆಂಗಸರಿಗೆ ಶೌಚಕ್ಕೆ ಹೋಗಲು ಜಾಗವಿಲ್ಲ, ದಯವಿಟ್ಟು ನಮಗೆ ಮಾಗಡಿ ರೋಡ್ ಟೋಲ್ ಗೇಟ್ ಬಳಿ ಬದುಕಲು ಅವಕಾಶ ಮಾಡಿ ಕೊಡಿ ಎಂದು ಕಂಡ ಕಂಡವರಲ್ಲಿ ಈ ಅಸಹಾಯಕ ಕುಟುಂಬಗಳು ಬೇಡಿಕೊಳ್ಳುತ್ತಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ವಲಸೆ ಕಾರ್ಮಿಕರಾಗಿ ಬಂದ ಈ ಕುಟುಂಬಗಳು ಹಲವಾರು ವರ್ಷಗಳಿಂದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಟೆಂಟ್ ಹಾಕಿಕೊಂಡು ಬದುಕುತ್ತಿದ್ದವು. ಬಲೂನ್ ಸೇರಿದಂತೆ ಇನ್ನಿತರ ಅಟಿಕೆ ಮತ್ತು ಸಣ್ಣ ಪುಟ್ಟ ವಸ್ತುಗಳನ್ನು ವ್ಯಾಪಾರ ಮಾಡಿಕೊಂಡು. ಬದುಕುತ್ತಿದ್ದರು. ಕೊರೊನಾ ಮಹಾಮಾರಿ ಬಂದಾಗಿನಿಂದ ಲಾಕ್ಡೌನ್ ನಿಂದಾಗಿ ವ್ಯಾಪಾರ ಇಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದ್ದಾರೆ. ಹೊಟ್ಟೆಗಿಲ್ಲದೆ ಕಂಗಾಲಾದ ಈ ಕುಟುಂಬವನ್ನು ಪೋಲೀಸರು ಎತ್ತಂಗಡಿ ಮಾಡಿದ್ದಾರೆ ಎಂದು ಈ ಬಡ ಕುಟುಂಬಗಳು ಅವಲತ್ತುಕೊಂಡಿವೆ.
ಆ ಕುಟುಂಬಗಳು ಸದ್ಯಕ್ಕೆ ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿರುವ ದೋಬಿ ಘಾಟ್ ಸಿಗ್ನಲ್ನಲ್ಲಿ ಕಾಮಗಾರಿ ನಡೆಯುತ್ತಿರುವ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಅಲ್ಲಿಂದಲೂ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ.
ಎಲ್ಲಾದರೂ ಹೋಗಿ ಲಾಕ್ ಡೌನ್ ಮುಗಿಯುವವರೆಗೂ ಈ ಕಡೆ ಕಾಣಿಸಿಕೊಳ್ಳಬೇಡಿ ಎಂದು ಬೆದರಿಸಿದ್ದಾರೆ. ಎಂದು ಸಂತ್ರಸ್ತರು ಹೇಳುತ್ತಾರೆ.
ಈ ಲಾಕ್ಡೌನ್, ಇರುವ ಈ ದಿನಗಳಲ್ಲಿ ಕೊರೊನಾ ಹರಡುವ ಭಯ ಇರುವುದರಿಂದ ಈ ಬಡಕುಟುಂಬಗಳು ಎಲ್ಲಿಗೆ ಹೋಗಬೇಕು. ಪೊಲೀಸರು ಮತ್ತು ಬಿಬಿಎಂಪಿಯವರು ಮಾನವೀಯತೆ ದೃಷ್ಟಿಯಿಂದ ಈ ಬಡಜನರಿಗೆ ತೊಂದರೆ ಕೊಡದೆ ಸರ್ಕಾರದ ವತಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು. ಆಹಾರದ ಕಿಟ್ಗಳನ್ನು ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.