ಬಿಜೆಪಿ ದೊಡ್ಡ ಕುಟುಂಬ ಅಸಮಾಧಾನ ಇರೋದು ಸಹಜ: ಮುರುಗೇಶ್ ನಿರಾಣಿ

ಕಲಬುರಗಿ: ಬಿಜೆಪಿ ಅನ್ನೋದು ದೊಡ್ಡ ಸಂಸಾರ, ಈ ಕುಟುಂಬದಲ್ಲಿ ರಾಜ್ಯದ 120 ಜನ ಶಾಸಕರಿದ್ದಾರೆ. ಇವರಲ್ಲಿ ಇಬ್ಬರು ಮೂವರಿಗೆ ಅಸಮಾಧಾನ ಇರೋದು ಸ್ವಾಭಾವಿಕ ಎಂದು ಸಚಿವ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ಜನ ಇರುವ ಮನೆಯಲ್ಲಿಯೇ ಅಸಮದಾನ ಇರುತ್ತದೆ. ಮನೆಗೆ ಸಂತೆ ತೆಗೆದುಕೊಂಡು ಹೋದಾಗ ಸ್ವಲ್ಪ ಹೆಚ್ಚುಕಮ್ಮಿಯಾದರೂ ಅಣ್ಣ ತಮ್ಮಂದಿರ ನಡುವೆ ಅಸಮಾಧಾನ ಹುಟ್ಟುತ್ತದೆ. ಹೀಗಿರುವಾಗ ಇಡಿ ಕರ್ನಾಟಕದ 120 ಜನ ಶಾಸಕರು ಇರುವ ಪಕ್ಷದಲ್ಲಿ ಅಸಮಾಧಾನ ಇರೋದು ಸಹಜ, ಇದನ್ನೆಲ್ಲಾ ನೋಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಸಮರ್ಥವಾಗಿದ್ದು ಎಲ್ಲವನ್ನು ಸರಿಪಡಿಸುತ್ತಾರೆ ಎಂದರು.
ಇದೆ ವೇಳೆ ಅರುಣ್ಸಿಂಗ್ ಕೇಂದ್ರಕ್ಕೆ ಸಲ್ಲಿಸಿರುವ 80 ಪುಟದ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ವರದಿ ಸಲ್ಲಿಸಿರುವ ಬಗ್ಗೆ ಯಾವುದೆ ಮಾಹಿತಿ ಇಲ್ಲ, ಮಾಧ್ಯಮದಲ್ಲಿ ನೋಡಿದ್ದೇನಷ್ಟೆ, ಅರುಣ್ ಸಿಂಗ್ ಸಲ್ಲಿಸಿರುವ 80 ಪುಟದ ವರದಿ ಕುರಿತಾಗಿ ಕ್ರಮ ತೆಗೆದುಕೊಳ್ಳುವವರು ಮೇಲಿದ್ದಾರೆ. ಅವರೆಲ್ಲಾ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ರಾಜ್ಯಕ್ಕೆ ಭೇಟಿ ನೀಡಿದ ಅರುಣಸಿಂಗ್ ರಾಜಕೀಯಕ್ಕಿಂತ ರಾಜ್ಯದ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ ನಡೆಸಿ ಹೋಗಿದ್ದಾರೆ. ಕಲಬುರಗಿ ಜಿಲ್ಲೆ ಕುರಿತಾಗಿ ಎರಡುವರೆ ತಾಸು ಸಮಗ್ರ ಚರ್ಚೆ ಮಾಡಿದ್ದಾರೆ. ಸದ್ಯದ ಅಭಿವೃದ್ಧಿ ಪರಸ್ಥೀತಿ ಹೇಗಿದೆ, ಮುಂದೆ ಏನ್ನೇಲ್ಲಾ ಮಾಡಬೇಕು ಅನ್ನೋದು ನನ್ನಿಂದ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ ನಿರಾಣಿ, ರಮೇಶ್ ಜಾರಕಿಹೊಳಿ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.ರಾಜಕೀಯ ಕುರಿತಾಗಿ ಯಾವುದೆ ಪ್ರಶ್ನೆಗೆ ಉತ್ತರಿಸುವದಿಲ್ಲ ಎಂದು ಜಾರಿಕೊಂಡರು.