ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ ಹೆಚ್ಚು ಆನೆಗಳು; ಓಡಿಸಲು ಹರಸಾಹಸ

ರಾಮನಗರ: ಹಲವು ತಿಂಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ರಾಮನಗರದ ತೆಂಗಿನಕಲ್ಲು ಹಾಗು ಚನ್ನಪಟ್ಟಣ ದ ನರಿಕಲ್ಲುಗುಡ್ಡ ಅರಣ್ಯದಿಂದ ಹತ್ತಕ್ಕೂ ಹೆಚ್ಚು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಬ್ಬಾಳು ಅರಣ್ಯದ ಕಡೆಗೆ ಅಟ್ಟಿದ್ದಾರೆ.
ರಾಮನಗರದ ಕೈಲಾಂಚ, ಚನ್ನಪಟ್ಟಣದ ವಿರುಪಾಕ್ಷಿಪುರ ಹೋಬಳಿಯ ಗ್ರಾಮಗಳಲ್ಲಿ ೨೩ಕ್ಕೂ ಹೆಚ್ಚು ಆನೆಗಳು ರೈತರ ತೋಟಗಳಿಗೆ ಮೇಲಿಂದ ಮೇಲೆ ದಾಳಿ ಮಾಡಿ, ಬೆಳೆ ಹಾಗು ಕೃಷಿ ಪರಿಕರಗಳನ್ನು ನಾಶ ಮಾಡುತ್ತಿದ್ದವು.
ರೈತರ ಆಕ್ರೋಶದಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಕಳೆದ ನಾಲ್ಕೈದು ದಿನಗಳಿಂದ ಈ ಆನೆಗಳನ್ನು ಕಾವೇರಿ ವನ್ಯಜೀವಿ ಧಾಮ, ಹಾಗು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹಟ್ಟಲು ಹರಸಾಹಸ ಪಡುತ್ತಿದ್ದಾರೆ.
ಸದ್ಯ ಕನಕಪುರ ತಾಲೂಕಿನ ಸಾತನೂರಿನ ವಲಯದ ಕಬ್ಬಾಳು ಅರಣ್ಯದಲ್ಲಿ ಆನೆಗಳು ಬೀಡು ಬಿಟ್ಟಿದ್ದು, ರಾತ್ರಿ ಸಾತನೂರು ಅರಣ್ಯದ ಮೂಲಕ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.