ಕಲಬುರಗಿಯಲ್ಲಿ ಮುಂಗಾರು ಚುರುಕು: ರೈತರನ್ನು ಹೈರಾಣಾಗಿಸಿದ ಬಿಜ ಗೊಬ್ಬರ ಕೊರತೆ

– ವೀರೇಶ ಚಿನಗುಡಿ
ಕಲಬುರ್ಗಿ: ವರುಣ ಕೃಪೆ ತೋರುತ್ತಿದ್ದಂತೆ ರಾಜ್ಯದಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡಿದೆ. ಬಿಸಿಲೂರು ಕಲಬುರಗಿಯಲ್ಲೂ ವಾಡಿಕೆಯಷ್ಟು ಮಳೆಯಾಗಿದ್ದು ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ಆದರೆ ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಒಂದೆಡೆ ಪರದಾಡುತ್ತಿದ್ದಾರೆ.
ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಗರಿಗೆದರಿದೆ. ಕೊರೊನಾ ಹಾವಳಿ, ಲಾಕ್ ಡೌನ್ ಮಧ್ಯೆಯೂ ರೈತರು ಬಿತ್ತನೆ ಕಾರ್ಯ ಜೊರಾಗಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಅನ್ನದಾತರು ರೈತ ಸಂಪರ್ಕ ಕೇಂದ್ರಗಳತ್ತ ಮುಖ ಮಾಡಿದ್ದಾರೆ.
ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಸೋಯಾ ಸೇರಿದಂತೆ ಮುಂಗಾರು ಬಿತ್ತನೆ ಬೀಜಗಳ ಖರೀದಿಯಲ್ಲಿ ತೊಡಗಿದ್ದಾರೆ. ಆದ್ರೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾ ಸೇರಿ ಕೆಲ ಬಿತ್ತನೆ ಬೀಜಗಳ ಕೊರತೆ ಕಾಡುತ್ತಿದೆ. ಅಲ್ಲದೆ ರಸಗೊಬ್ಬರ ಕೊರತೆಯೂ ರೈತರಿಗೆ ಎದುರಾಗಿದೆ. ಒಂದು ಸಿಕ್ಕರೆ ಮತ್ತೊಂದು ಸಿಗುತ್ತಿಲ್ಲಾ ಎಂದು ರೈತರು ಆರೋಪ ಮಾಡುತ್ತ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನು ಪ್ರತಿವರ್ಷದಂತೆ ಜಿಲ್ಲೆಯಲ್ಲಿ ಈಗಾಗಲೇ 60 ಮಿಲಿ ಮೀಟರ್ ವಾಡಿಕೆ ಮಳೆಯಾಗಿದೆ. ಜಿಲ್ಲೆಯಲ್ಲಿ 7.5 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದ್ದು, ಶೇಕಡ 70% ರಷ್ಟು ರೈತರು ತೊಗರಿ ಬೆಳೆಯುತ್ತಾರೆ. ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ 22 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ ಇದ್ದು, ಸದ್ಯ 16 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ. 33 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ರೆ 13 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಈ ಅಂಕಿ ಅಂಶ ನೋಡಿದರೆ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಇರೋದು ಸ್ಪಷ್ಟವಾಗಿದೆ.
ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ವಿತರಣೆ ಮಾಡಲಾಗ್ತಿದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು 10 ಹೆಚ್ಚುವರಿ ಕೇಂದ್ರಗಳನ್ನ ತೆರೆದು ಬೀಜ, ಗೊಬ್ಬರ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಒಂದೆಡೆ ಮುಂಗಾರು ಬಿತ್ತನೆ ಉತ್ಸಾಹದಲ್ಲಿರುವ ರೈತರು ಬೀಜ, ರಸಗೊಬ್ಬರ ಕೊರತೆಯ ಸಮಸ್ಯೆ ಎದುರಿಸುತ್ತಿದ್ದರೆ, ಇತ್ತ ಜಂಟಿ ಕೃಷಿ ನಿರ್ದೇಶಕ ರತೇಂದ್ರ ಸೂಗೂರು ಮಾತ್ರ ಬೀಜ, ರಸಗೊಬ್ಬರ ಕೊರತೆ ಇಲ್ಲಾ ಎನ್ನುತ್ತಿದ್ದಾರೆ.
ಒಟ್ನಲ್ಲಿ ಸಾಲು ಸಾಲು ಸಂಕಷ್ಟ ಎದುರಿಸಿರುವ ಅನ್ನದಾತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಪರದಾಡುವಂತೆ ಮಾಡಿದ್ರೆ, ಬೆಲೆ ಏರಿಕೆ ಬಿಸಿ ಕೂಡ ರೈತರಿಗೆ ತಟ್ಟಿದೆ. ಸದಾ ಅನ್ನದಾತರ ಪರವಾಗಿದೆ ಸರ್ಕಾರ ಅಂತಿರೋ ಆಡಳಿತ ನಡೆಸೋರೋ ರೈತರ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಿದೆ.