ಯಲ್ಲಾಪುರ: ಜಂಬೆಸಾಲ್ ಸೇವಂತಿಗೆ ತೋಟಕ್ಕೆ ಜಿಪಂ ಸಿಇಒ ಪ್ರಿಯಾಂಗ್ ಎಮ್ ಭೇಟಿ

ಕಾರವಾರ : ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪ ಕೃಷಿಯಿಂದ ಜೀವನೋಪಾಯ ಕಂಡುಕೊಂಡ ಕೃಷಿಕರ ತೋಟಕ್ಕೆ ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ್ ಎಮ್ ಭೇಟಿ ನೀಡಿದರು.
ಗ್ರಾಮ ಪಂಚಾಯತಿ ಮಟ್ಟದ ಸ್ವಸಹಾಯ ಒಕ್ಕೂಟದ ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಜಂಬೇಸಾಲದ ಶ್ರೀದೇವಿ ಸ್ವಸಹಾಯ ಸಂಘದ ಸದಸ್ಯೆ ಭವಾನಿ ಹೆಗಡೆಯವರು ಸ್ವ – ಉದ್ಯೋಗ ಕೈಗೊಂಡಿದ್ದಾರೆ.
ಅವರ ಪುತ್ರ ರಾಜೀವ, ಸೊಸೆ ಶ್ರೀಲತಾ ಅವರ ಸಹಕಾರದಿಂದ ಪುಷ್ಪ ಕೃಷಿಯಲ್ಲಿ ಮಾರಿಗೋಲ್ಡ್ ಸೇವಂತಿಗೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹೊಲಿಗೆ, ಮನೆ ಕಟ್ಟಲು, ಬಂಗಾರ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಸಾಲ ಪಡೆಯುವುದು ಸಾಮಾನ್ಯ. ಆದರೆ ಇವರು ಮಲೆನಾಡಿನಲ್ಲಿ ವಿರಳವಾದ ಪುಷ್ಪಕೃಷಿ ಕೈಗೊಂಡು ಯಶಸ್ವಿಯಾಗಿದ್ದು, ಇತರರಿಗೂ ಸ್ಪೂರ್ತಿಯಾಗಿದ್ದಾರೆಂದು ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.