ART LITERATURE:
ಒಂದು ಹಳ್ಳಿಯ ಹೊರವಲಯದ ದೇವಸ್ಥಾನವೊಂದರಲ್ಲಿ ಒಬ್ಬ ಪಂಡಿತ ವಾಸವಾಗಿದ್ದ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಪೂಜೆಗಳನ್ನು ಮಾಡಿಸುತ್ತಿದ್ದ. ಸಾಯಂಕಾಲದ ಊಟ ಮಾಡಿ ಮುಗಿಸಿದ ಮೇಲೆ ಉಳಿದ ಆಹಾರವನ್ನು ಒಂದು ಪಾತ್ರೆಯಲ್ಲಿಟ್ಟು ಅದನ್ನು ದೇವಾಲಯದ ಸೂರಿಗೆ ನೇತು ಹಾಕುತ್ತಿದ್ದ. ಅದೇ ದೇವಾಲಯದಲ್ಲಿ ಒಂದು ದಪ್ಪ ಇಲಿ ಇತ್ತು. ಅದೆಷ್ಟು ದಪ್ಪಗಿತ್ತು ಎಂದರೆ ಬೆಕ್ಕುಗಳನ್ನ ಕಂಡರೂ ಅದು ಹೆದರುತ್ತಿರಲಿಲ್ಲ. ಪ್ರತಿ ದಿನ ರಾತ್ರಿ ಅದು ತನ್ನ ಬಿಲದಿಂದ ಹೊರಬಂದು ದೇವಾಲಯದ ಸೂರಿಗೆ ತಗುಲಿ ಹಾಕಿದ್ದ ಪಾತ್ರೆಯ ಮೇಲೆ ಹಾರುತ್ತಿತ್ತು. ಅಲ್ಲಿದ್ದದ್ದನ್ನು ತಿಂದು ಬಿಡುತ್ತಿತ್ತು. ಮರುದಿನ ಬೆಳಿಗ್ಗೆ ಪಂಡಿತ ಆ ಪಾತ್ರೆಯನ್ನು ನೋಡಿದಾಗ ಅದು ಖಾಲಿಯಾಗಿರುತ್ತಿತ್ತು. ಇದು ದಿನವೂ ನಡೆಯಲಾರಂಭಿಸಿತು. ಪಂಡಿತನಿಗೆ ಬೇಸರ ಉಂಟಾಯಿತು. ದೇವಾಲಯದಿಂದ ದಪ್ಪ ಇಲಿಯನ್ನು ಓಡಿಸುವುದು ಹೇಗೆಂದು ಗೊತ್ತಾಗಲಿಲ್ಲ. ಒಂದು ದಿನ ಇನ್ನೊಂದು ಗ್ರಾಮದ ಸನ್ಯಾಸಿಯೊಬ್ಬ ಪಂಡಿತನೊಂದಿಗೆ ಕೆಲವು ದಿನ ಇರಲು ಬಂದ. ಅತಿಥಿಗೆ ಆಹಾರ ಕೊಡಲು ಪಂಡಿತನ ಹತ್ತಿರ ಏನೂ ಉಳಿದಿರಲಿಲ್ಲ. ಏನೂ ಯೋಚಿಸಬೇಡಿ. ಈ ಇಲಿ ಎಲ್ಲಿ ವಾಸಿಸುತ್ತದೆ ಎಂದು ಅದರ ಬಿಲವನ್ನು ಮೊದಲು ಹುಡುಕಿ ಅದನ್ನು ನಾಶ ಮಾಡಬೇಕು ಆ ಇಲಿ ಬಿಲದಲ್ಲಿ ಬೇಕಾದಷ್ಟು ಆಹಾರವನ್ನು ಸೇರಿಸಿಟ್ಟಿರಬೇಕು. ಆ ಸೇರಿಸಿರುವ ಆಹಾರದ ವಾಸನೆಯಿಂದಲೇ ಈ ಇಲಿಗೆ ಎಲ್ಲೆಂದರಲ್ಲಿ ಎಗರಿ ಪಾತ್ರೆಯನ್ನು ತಲುಪಲು ಆಗುತ್ತಿದೆ ಎಂದ ಸನ್ಯಾಸಿ. ಆ ಪಂಡಿತ ಮತ್ತು ಸನ್ಯಾಸಿ ಒಟ್ಟಿಗೆ ಸೇರಿ ಆ ಇಲಿಯ ಬಿಲವನ್ನು ಹುಡುಕಿದರು. ಅಲ್ಲೆಲ್ಲ ತೋಡಿ ಅಲ್ಲಿದ್ದ ಆಹಾರದ ಗುಪ್ಪೆಯನ್ನು ನಾಶ ಮಾಡಿದರು. ತನ್ನ ಬಿಲದಲ್ಲಿದ್ದ ಆಹಾರವನ್ನೆಲ್ಲ ನಾಶಪಡಿಸಿದ್ದು ನೋಡಿ ಇಲಿಗೆ ಆಶಾಭಂಗವಾಯಿತು. ಅದರ ವಾಸನೆ ಹೀರದೆ, ತಿನ್ನದೆ ಅದಕ್ಕೆ ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ. ಅದು ಹಸಿವಿನಿಂದ ಬಳಲಬೇಕಾಯಿತು. ಅದು ಬಡವಾಯಿತು. ಬಲಹೀನವಾಗಿ ಅಲ್ಲಿ ಇಲ್ಲಿ ಓಡಾಡುತ್ತಿದ್ದಾಗ ಆಹಾರಕ್ಕಾಗಿ ಅಲ್ಲೆಲ್ಲ ಠಳಾಯಿಸುತ್ತಿದ್ದ ಒಂದು ಬೆಕ್ಕು ಇಲಿಯ ಮೇಲೆ ಹಾರಿ ಅದನ್ನು ತಿಂದು ಮುಗಿಸಿತು.
ನೀತಿ: ಇರೋದು ಕೂಡಿಟ್ಟು ಪರರ ಪಾಲಿಗೆ ಆಸೆ ಪಡಬೇಡ