DISTRICT:
ಬೆಂಗಳೂರು: ಕೇಂದ್ರ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಕ್ಷಿಣ ಕನ್ನಡದ ಹವ್ಯಕರ ಬೀಗರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮೊಮ್ಮಗಳಾದ ‘ಪ್ರಾರ್ಥನ’ ರ ವಿವಾಹವು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಗಿಲ್ಕಿಂಜದ ಶಾರದಾ ಮತ್ತು ಜಯಗೋವಿಂದ್ ರ ಸಹೋದರ ಹರಿಶಂಕರ್ ಮತ್ತು ವಿಜಯಲಕ್ಷ್ಮಿ ರವರ ದ್ವಿತೀಯ ಪುತ್ರ ‘ಪಾಣಿನಿ’ ರವರೊಂದಿಗೆ ಅ.25 ರಂದು ‘ಬೆಂಗಳೂರು ಅರಮನೆ’ ಯಲ್ಲಿ ನಡೆಯಿತು. ಈ ಮೂಲಕ ಖರ್ಗೆ ಹವ್ಯಕ ಬ್ರಾಹ್ಮಣರ ಮನೆಯ ಬೀಗರಾಗಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಕುಟುಂಬದ ಜತೆಗೆ ಹವ್ಯಕ ಬ್ರಾಹ್ಮಣ ಸಮುದಾಯದ ಕುಟುಂಬ ಸಂಬಂಧ ಬೆಳೆಸಿದ್ದಾರೆ. ಪ್ರಾರ್ಥನಾ ಮತ್ತು ಪಾಣಿನಿ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಒಪ್ಪಿಸಿದ್ದಾರೆ. ಈ ಎರಡೂ ಕುಟುಂಬದ ಜಾತಿ ಬೇರೆ ಬೇರೆಯಾಗಿದ್ದರೂ ಪರಸ್ಪರ ಮದುವೆಗೆ ಒಪ್ಪಿಗೆ ನೀಡಿ, ಮದುವೆ ಮಾಡಿರುವುದು ಪ್ರಶಂಸನೀಯವಾಗಿದೆ.
ಮದುವೆ ಸಮಾರಂಭದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಾ.ಜಿ.ಪರಮೇಶ್ವರ, ಮಾಜಿ ಸಿ.ಎಂ. ಸಿದ್ದರಾಮಯ್ಯ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಇತರ ಗಣ್ಯಾತಿಗಣ್ಯರು ಭಾಗವಹಿಸಿದ್ದರು.