DISTRICT: ರಾಮನಗರ: ಕಾಂಗ್ರೆಸ್ ನಾಯಕರು ಪಾಪದ ಮೂಟೆ ಹೊರಬೇಕಿದೆ, ವ್ಯಾಕ್ಸಿನ್ ವಿಚಾರವಾಗಿ ಸಾಕಷ್ಟು ಅಪಪ್ರಚಾರ ಮಾಡಿದ್ರು, ಈಗ ಅವರ ಮನೆಯವರೇ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ದ ಸಚಿವ ಸಿ.ಪಿ.ಯೋಗೇಶ್ವರ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರಂತಹ ಧುರೀಣರು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಜನರಿಗೆ ಎಲ್ಲವೂ ಗೊತ್ತಾಗಿದೆ. ಹಾಗಾಗಿ ಜನರೇ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಾವು ನೋವು ಆಗಲು ಕಾಂಗ್ರೆಸ್ಸಿಗರ ಅಪಪ್ರಚಾರ ಕಾರಣ ಎಂದು ಆರೋಪ ಮಾಡಿದರು. ಇನ್ನೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವರದಿ ವಿಚಾರವಾಗಿ ಮಾತನಾಡಿ ನಾನು ಯಾವುದೇ ರಾಜಕೀಯ ವಿಚಾರ ಮಾತನಾಡಬಾರದು ಅಂತಾ ತೀರ್ಮಾನ ಮಾಡಿದ್ದೇನೆ, ಅರುಣ್ ಸಿಂಗ್ ಜೊತೆಗೆ ಚರ್ಚೆ ಮಾಡಿರುವ ವಿಚಾರ ಮಾಧ್ಯಮದ ಮುಂದೆ ಮಾತನಾಡಲ್ಲ, ಅವರು ಕೊಟ್ಟಿರುವ ವರದಿ ನನಗೆ ಗೊತ್ತಿಲ್ಲ. ಮೂರು ಜನರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ವಿಚಾರ ಅದರ ಬಗ್ಗೆ ನನಗೆ ಗೊತ್ತಿಲ್ಲ ಪಾರ್ಟಿ ಏನ್ ಮಾಡಲಿದೆಯೋ ಅಂತಾ ನನಗೆ ಗೊತ್ತಿಲ್ಲ, ಆದರೆ ಇನ್ನು ಎರಡ್ಮೂರು ದಿನ ಕಾದು ನೋಡುತ್ತೇನೆ ಎಂದರು.