DISTRICT:
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವ ಕುರಿತು ಚರ್ಚಿಸಲು ವೀರಶೈವ ಸಮುದಾಯದ ಸಭೆ ನಡೆದಿದೆ.
ಚಿತ್ರದುರ್ಗದ ಸಿಬಾರ ಬಳಿಯ ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಮಾಜಿ ಸಚಿವ ಹೆಚ್.ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಮಾಲೋಚನಾ ಸಭೆ ನಡೆದಿದೆ.
ಈ ವೇಳೆ ಕೆಲಕಾಲ ಎರಡು ಗುಂಪುಗಳ ನಡುವೆ ವಾಗ್ವಾದ , ತಳ್ಳಾಟ ನಡೆದ ಬಗ್ಗೆ ವರದಿಯಾಗಿದೆ. ಸಭೆಯಲ್ಲಿ ಕಾರ್ತಿಕ್ ಎಂಬಾತ ಸರ್ಕಾರದಿಂದ ಮಠದ ಆಡಳಿತಾಧಿಕಾರಿ ನೇಮಕ ಬೇಡ ಎಂದು ಹೇಳಿದ್ದಾನೆ, ಈ ವೇಳೆ ಕೆಲವರು ಯುವಕ ಕಾರ್ತಿಕ್ ಗೆ ಸಾಥ್ ನೀಡಿದರು, ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಡಾ. ಶಿವಮೂರ್ತಿ ಶಿವಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಇಂದು ಕರೆಯಲಾಗಿತ್ತು. ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಮುರುಘಾ ಶರಣರನ್ನು ವಜಾಗೊಳಿಸುವ ಬಗ್ಗೆ ಚರ್ಚೆ ನಡೆದಿದೆ.