DISTRICT:
ಕೊಡಗು: ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದ ಯುವಕನನ್ನು ಹುಲಿಯೊಂದು ಬರ್ಬರವಾಗಿ ಕೊಂದು ಹಾಕಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಿ.ಬಾಡಗ ಗ್ರಾಮದಲ್ಲಿ ನಡೆದಿದೆ.
29 ವರ್ಷದ ಯುವಕ ಗಣೇಶ್, ಹುಲಿ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ. ಬಾಡಗ ಗ್ರಾಮದ ಅಯ್ಯಪ್ಪ ಎಂಬುವವರ ಕಾಫಿ ತೋಟದಲ್ಲಿ ಗಣೇಶ್ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ ತೋಟದಲ್ಲಿ ಗಣೇಶ್ ಕಾಳು ಮೆಣಸು ಕೊಯ್ಯುತ್ತಿದ್ದ. ಈ ವೇಳೆ ಏಕಾ ಏಕಿ ದಾಳಿ ಮಾಡಿದ ಹುಲಿ ಸ್ಥಳದಲ್ಲಿಯೇ ಕೊಂದು ಹಾಕಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಇದೀಗ ಗ್ರಾಮದಲ್ಲೇ ಹುಲಿ ದಾಳಿ ಮಾಡಿ ಯುವಕನನ್ನು ಕೊಂದು ಹಾಕಿರುವುದರಿಂದ ಜನರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಹುಲಿ ದಾಳಿಯಿಂದ ಆಕ್ರೋಶಗೊಂಡಿರುವ ಜನರು ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು. ಇಲ್ಲದಿದ್ದರೆ ನಮಗೆ ಅವಕಾಶ ನೀಡಿ ನಾವೇ ಕೊಂದು ಹಾಕುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಒಂದು ವಾರದ ಹಿಂದೆಯಷ್ಟೇ ಗಣೇಶ್ ರನ್ನ ಹುಲಿ ಕೊಂದಿರುವ ಜಾಗದಲ್ಲೇ ಸುಬ್ಬಯ್ಯ ಎಂಬುವರ ಹಸುವನ್ನು ಬಲಿ ಪಡೆದುಕೊಂಡಿತ್ತು. ಕಳೆದ ವರ್ಷ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ ನಿರಂತರ ದಾಳಿ ಮಾಡಿದ್ದ ಹುಲಿ ಮೂವರನ್ನು ಬಲಿ ಪಡೆದುಕೊಂಡಿತ್ತು. ಬಳಿಕ ಸರ್ಕಾರದ ಆದೇಶದ ಮೇಲೆ ಹುಲಿಯನ್ನ ಶೂಟ್ ಮಾಡಿ ಕೊಲ್ಲಲಾಗಿತ್ತು.