DISTRICT:
ಬೆಂಗಳೂರು: ಕನ್ನಡ ಪರ ಹೋರಾಟಗಾರ ಬಸವರಾಜ ಪಡುಕೋಟೆ ನೇತೃತ್ವದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ “ನಮ್ಮ ಕರ್ನಾಟಕ ಸೇನೆ”ಯ ಲಾಂಛನಾ ಬಿಡುಗಡೆ ಹಾಗೂ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೆಂಗಳೂರಿನಲ್ಲಿ ಭಾನುವಾರ ನಡೆಯಿತು.
ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ವರಲಿಂಗೇಶ್ವರ ಸ್ವಾಮೀಜಿ, ಲೇಖಕಿ ವಸುಂದರ ಭೂಪತಿ ಚಾಲನೆ ನೀಡಿದರು. ನಂತರ ಮಾತನಾಡಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ , ಯಾವುದೇ ಸಂಘ ಹುಟ್ಟು ಹಾಕ ಬೇಕಾದರೆ ಆತ್ಮವಲೋಕನ ಮಾಡಿಕೊಳ್ಳುವುದು ಅತ್ಯಗತ್ಯ. ಚಳವಳಿಗಳು ಮೂಲ ಸಮಸ್ಯೆ ಅರಿತು ನೈತಿಕತೆ ಮತ್ತು ಶುದ್ಧತೆಯಿಂದ ನಡೆಯಬೇಕು ಎಂದು ಆಶಿಸಿದರು.
ಲೇಖಕಿ ವಸುಂದರ ಭೂಪತಿ , ಕನ್ನಡಿಗರಿಗೆ ಖಾಸಗಿ ಹಾಗೂ ಸರ್ಕಾರಿ ಸಾರ್ವಜನಿಕ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕಿದೆ ಎಂದರು.
ಪುಣ್ಯಕೋಟಿ ಆಶ್ರಮ ವರಲಿಂಗೇಶ್ವ ಸ್ವಾಮೀಜಿ , ಕನ್ನಡಕ್ಕೆ ಯಾವುದೇ ಅನ್ಯಾಯವಾದಾಗ ನಮ್ಮ ಕರ್ನಾಟಕ ಸೇನೆ ಮುಂದೆ ನುಗ್ಗಿ ಹೋರಾಟ ನಡೆಸಬೇಕು. ಯಾರಿಗೂ ನಾವು ಗುಲಾಮರಾಗದೇ ಕನ್ನಡ ತಾಯಿ, ಕನ್ನಡ ಭಾಷೆಗೆ ಗುಲಾಮರಾಗಿ ಕನ್ನಡ ನುಡಿ, ಸಂಸ್ಕೃತಿ ರಕ್ಷಣೆಗೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟಿ ಮಾತನಾಡಿ, 25 ವರ್ಷಕ್ಕೂ ಹೆಚ್ಚು ಕಾಲದಿಂದ ತಾವು ಕರವೇ ಕಾರ್ಯಕರ್ತರಾಗಿ ಹೋರಾಟ ಮಾಡಿಕೊಂಡು ಬಂದಿದ್ದು ಫಲವಾಗಿ ಹಲವು ಪ್ರಕರಣಗಳು ತಮ್ಮ ಮೇಲೆ ದಾಖಲಾಗಿವೆ. ಆದರೂ ಅಂಜದೇ ಕಲ್ಯಾಣ ಕರ್ನಾಟಕಕ್ಕೆ ಕನ್ನಡ ಸಂಘಟನೆ ಕೊರತೆ ನೀಗಿಸಲು ಹಲವರ ಒತ್ತಾಯದ ಮೇರೆಗೆ ಹೊಸ ಸಂಘಟನೆ ಹುಟ್ಟುಹಾಕಿದ್ದೇನೆ. ಕನ್ನಡಿಗರಿಗೆ ನ್ಯಾಯ ದೊರಕಿಸುವ ಸಂಬಂಧ ಪ್ರಾಮಾಣಿಕ ಮತ್ತು ರಾಜಿರಹಿತ ಹೋರಾಟ ಮುನ್ನಡೆಸುತ್ತೇನೆ ಎಂದು ವಾಗ್ದಾನ ನೀಡಿದರು.
ಸಮಾರಂಭದಲ್ಲಿ ಸಂಘಟನೆಯ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.