DISTRICT:
ರಾಯಚೂರು: ಭಾರತ್ ಜೋಡೋ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯ ಆಪ್ತೆ ನಟಿ ರಮ್ಯಾಗೆ ಮುಜುಗರ ಆಗುವಂಥ ಪ್ರಸಂಗವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಾಹುಲ್ ಗಾಂಧಿಯ ಕಾರ್ನರ್ ಮೀಟಿಂಗ್ ವೇಳೆ ರಮ್ಯಾಗೆ ವೇದಿಕೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.
ಇದರಿಂದ ತೀವ್ರ ಬೇಸರಗೊಂಡ ಅವರು ವಾಪಸ್ ಹೋಗಿದ್ದಾರೆ.
ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ. ಸಂಜೆ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ರಮ್ಯ, ಬಳಿಕ ರಾಹುಲ್ ಕಾರ್ನರ್ ಮೀಟಿಂಗ್ ಸ್ಥಳಕ್ಕೂ ಆಗಮಿಸಿದ್ದರು.
ಈ ವೇಳೆ ವೇದಿಕೆ ಏರಿ ಕೂರಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ಅತಿಥಿಗಳ ಪಟ್ಟಿಯಲ್ಲಿ ರಮ್ಯ ಹೆಸರು ಇರದ ಕಾರಣ ಭದ್ರತಾ ಸಿಬ್ಬಂದಿ ಈ ಕ್ರಮಕೈಗೊಂಡಿದ್ದರು. ಇದರಿಂದ ಸಿಟ್ಟಾದ ರಮ್ಯ, ಎಂಟ್ರಿ ಕೊಡದ ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಎಷ್ಟೇ ಮನವಿ ಮಾಡಿಕೊಂಡರೂ ಭದ್ರತಾ ಸಿಬ್ಬಂದಿ ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ರಮ್ಯ, ಕೆಲಹೊತ್ತು ಅಲ್ಲೇ ವೇದಿಕೆ ಬಳಿ ವಾಗ್ವಾದ ನಡೆಸಿ ನಂತರ ಕೋಪಗೊಂಡು ಅಲ್ಲಿಂದ ವಾಪಸ್ ಹೋದರು. ಈ ಕುರಿತ ವಿಡಿಯೋ ತುಣುಕೊಂದು ಹರಿದಾಡುತ್ತಿದೆ.