DISTRICT: ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಐತಿಹಾಸಿಕ ಮಹಾದೇವ ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ವಾಸವಾಗಿದ್ದ 15 ಕ್ಕೂ ಹೆಚ್ಚು ಹಾವುಗಳನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಕೆರೆಯಲ್ಲಿ ಮೀನು ಹಿಡಿಯುವ ಸಂಧರ್ಭದಲ್ಲಿ ಬಲೆಯಲ್ಲಿ ಮೀನಿನ ಜೊತೆ ಹಾವುಗಳು ಬಂದ್ರೆ, ತಕ್ಷಣ ಹಾವುಗಳನ್ನು ಕೊಂದು, ಮೀನುಗಳನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ಕೆರೆಯ ಪಕ್ಕದಲ್ಲಿ ಗುಂಪು- ಗುಂಪಾಗಿ ಹಾವುಗಳು ಸಾವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಮತ್ತು ತಾಲೂಕ ಆಡಳಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಾವುಗಳು ಕೆರೆಯಲ್ಲಿದ್ದಿದ್ದೇಕೆ ಗೊತ್ತಾ? ಕೊಪ್ಪಳಕ್ಕೆ ಬಿಸಿಲ ನಾಡು ಎಂಬ ಅನ್ವರ್ಥವೂ ಇದೆ. ಇನ್ನೇನು ಮಳೆಗಾಲ ಸನ್ನೀಹಿತದ ಕಾಲವಾದರೂ ಸುಡುಬಿಸಿಲ ಝಳ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಪೋದೆ-ಪೊಟರೆಗಳಲ್ಲಿ ವಾಸವಿರುವ ಹಾವುಗಳು ಭೂಮಿಯ ಬಿಸಿ ತಪ್ಪಿಸಿಕೊಳ್ಳಲು ಕೆರೆ, ಬಾವಿಗಳಲ್ಲಿ ಹೆಚ್ಚಾಗಿ ಕಾಣಿಸುವುದುಂಟು. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಹೋಗಿ ದುರುಳರ ಕೃತ್ಯಕ್ಕೆ ಜೀವವನ್ನೇ ಕಳೆದುಕೊಂಡು ಕೆರೆ ದಂಡೆ ಪಕ್ಕ ಅನಾಥವಾಗಿ ಬಿದ್ದಿವೆ.