DISTRICT:
ಉಡುಪಿ: ಪದವಿ ಶಿಕ್ಷಣ ಕಲಿಯಲೆಂದು ದುಬಾೖಗೆ ತೆರಳಿದ್ದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ ಕ್ಕೀಡಾಗಿ ಡಿ. 5ರಂದು ಮೃತಪಟ್ಟಿದ್ದಾರೆ.
ಕಾಪು ತಾಲೂಕಿನ ಅಹ್ಮದ್ ಬಿಲಾಲ್ ಕಾಪು (20) ಮೃತರು. ಉಡುಪಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ದುಬಾೖಗೆ ತೆರಳಿದ್ದ ಬಿಲಾಲ್ , ಪದವಿ ಶಿಕ್ಷಣವನ್ನು ಗಳಿಸುವ ಉದ್ದೇಶದಿಂದ ತೆರಳಿದ್ದರು.
ಆದರೆ ಆ ಬಳಿಕ ಜ್ವರಕ್ಕೆ ತುತ್ತಾಗಿದ್ದರು.
ನ್ಯುಮೋನಿಯಾ ಕೂಡ ಕಾಡಿದ್ದರಿಂದ ಚಿಕಿತ್ಸೆಗಾಗಿ ಶಾರ್ಜಾ ದಲ್ಲಿರುವ ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಡಿ. 5ರಂದು ನಿಧನರಾದರು ಎಂದು ತಿಳಿದುಬಂದಿದೆ.
ಬಿಲಾಲ್ ತಂದೆ 35 ವರ್ಷಗಳಿಂದ ದುಬಾೖಯಲ್ಲಿ ಅನಿವಾಸಿ ಭಾರತೀಯ ನಾಗಿ ದುಡಿಯುತ್ತಿದ್ದ ಹಿನ್ನೆಲೆಯಲ್ಲಿ, ಪದವಿ ಶಿಕ್ಷಣ ಕಲಿಯಲು ಬಿಲಾಲ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದುಬಾೖಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ ದಿಢೀರ್ಅನಾರೋಗ್ಯಕ್ಕೀಡಾಗಿ ನಿಧನರಾದರು.
ಮೃತದೇಹದ ಅಂತ್ಯ ಸಂಸ್ಕಾರವು ದುಬಾೖಯ ಅಲ್ಕೂಝ್ ಮಸೀದಿಯಲ್ಲಿ ಸೋಮವಾರ ರಾತ್ರಿ ನಡೆಯಿತು.
ದುಬಾೖಗೆ ತೆರಳಿದ ಕುಟುಂಬ
ಸದ್ಯ ಬಿಲಾಲ್ ಕುಟುಂಬ ದುಬಾೖನಲ್ಲಿದೆ ಎಂದು ಬಿಲಾಲ್ ಸಂಬಂಧಿ ಆಸಿಫ್ ಉಚ್ಚಿಲ ಮಾಹಿತಿ ನೀಡಿದ್ದಾರೆ.
ತಂದೆ ಅಬ್ದುಸ್ಸಲಾಂ ಸೂರಿಂಜೆ, ತಾಯಿ ಝೀನತ್ ಗುರುಪುರ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರನನ್ನು ಅವರು ಅಗಲಿದ್ದಾರೆ.