DISTRICT:
ಮಂಗಳೂರು: ಕೋವಿಡ್ ಅನ್ಲಾಕ್ ಪ್ರಕ್ರಿಯೆ ಈಗಲೂ ಜಾರಿಯಲ್ಲಿದ್ದು, ಸ್ಥಗಿತಗೊಂಡಿದ್ದ ಮಂಗಳೂರು - ಕಾಸರಗೋಡು ಬಸ್ ಸೇವೆ ಜು.19ರಿಂದ ಪುನರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸುವ ಅನಿವಾರ್ಯ ಪರಿಸ್ಥಿತಿಯಿದೆ. ಸಂಭವನೀಯ 3ನೇ ಅಲೆಯ ಹತೋಟಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೆರೆರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಕಾಸರಗೋಡು ಭಾಗದಿಂದ ಶಾಲಾ-ಕಾಲೇಜು, ಕಚೇರಿ, ವ್ಯಾಪಾರ-ವಹಿವಾಟು ಸಹಿತ ವಿವಿಧ ಕಾರಣಗಳಿಂದ ಜನಸಂಚಾರ ಹೆಚ್ಚಾಗಿರುವುದರಿಂದ ಸಂಚಾರ ಮಾಡುವವರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.
ಪ್ರಯಾಣಿಕರು ಕೋವಿಡ್ ಲಸಿಕೆ ಕನಿಷ್ಠ 1 ಡೋಸ್ ಪಡೆದಿರುವ ಅಥವಾ 72 ಗಂಟೆಗಳ ಒಳಗೆ ಪರೀಕ್ಷೆ ಮಾಡಿರುವ ಆರ್ ಟಿಪಿಸಿಆರ್ ನೆಗೆಟೀವ್ ವರದಿಯನ್ನು ಬಸ್ ನಿರ್ವಾಹಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್, ಸುರಕ್ಷಿತ ಅಂತರ ಸಹಿತ ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಬೇಕಾದದ್ದು ಕಡ್ಡಾಯ. ನಿಯಮ ಉಲ್ಲಂಘಿಸುವ ವ್ಯಕ್ತಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಿ ಸಿ ಡಾ.ರಾಜೇಂದ್ರ ತಿಳಿಸಿದ್ದಾರೆ.