DISTRICT:
-ರಾಜೇಶ್ ಕೊಂಡಾಪುರ
ರಾಮನಗರ: ಗುಬ್ಬಚ್ಚಿಗಳಿಲ್ಲದ ಮನೆ, ಉರುಗಳಿಲ್ಲ ಎನ್ನುವ ಮಾತು ದಶಕಗಳ ಹಿಂದಿನವರೆಗೂ ಬಹಳ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳು ಈಗ ಕಣ್ಮರೆಯಾಗಿವೆ. ಇಂದಿನ ಮಕ್ಕಳಿಗೆ ಚಿತ್ರದಲ್ಲಿ ತೋರಿಸುವಂತಾಗಿರುವ ವನ್ಯ ಪ್ರಾಣಿಗಳ ಸಾಲಿಗೆ ಗುಬ್ಬಚ್ಚಿಗಳು ಸೇರಿರುವುದು ಬೇಸರದ ಸಂಗತಿಯಾಗಿದೆ.
ಆದರೆ, ಕನಕಪುರದ ಮಳಗಾಳಿನ ಮರಸಪ್ಪ ರವಿ ಅವರ ಮನೆಯ ಆವರಣದಲ್ಲಿ ಗುಬ್ಬಚ್ಚಿಗಳ ಚೀಂವ್ ಚೀಂವ್ ಕೇಳೋದೆ ಬಹು ಆನಂದ! ಹೌದು ಅಂತಹದೊಂದು ಪರಿಸರವನ್ನು ತಮ್ಮ ಮನೆ ಆವರಣದಲ್ಲಿ ನಿರ್ಮಾಣ ಮಾಡಿರುವುದರಿಂದ ಮರಸಪ್ಪ ಅವರ ಮನೆ ಆವರಣ ನಿತ್ಯ ಹರಿದ್ವರ್ಣದಂತಿದ್ದು, ಇದರಿಂದಾಗಿ ಗುಬ್ಬಿಗಳ ಜೊತೆಗೆ ಕೋಗಿಲೆ, ಸೇರಿದಂತೆ ಹತ್ತಾರು ಪಕ್ಷಿಗಳು ಇಲ್ಲಿ ನೆಲೆಯಾಗಿರುವುದು ಮತ್ತು ಅವುಗಳನ್ನ ಪೋಷಣೆ ಮಾಡುತ್ತಿರುವ ಮರಸಪ್ಪ ರವಿ ಮತ್ತು ಅವರ ಕುಟುಂಬವನ್ನು ಜನತೆ ಶ್ಲಾಘಿಸುತ್ತಿದ್ದಾರೆ.
ಮರಸಪ್ಪ ರವಿ ಮನೆ ನಿರ್ಮಾಣದ ಸಂದರ್ಭದಲ್ಲಿ ಕೇವಲ ನಾಲ್ಕು ಗುಬ್ಬಚ್ಚಿಗಳು ಮಾತ್ರ ಇವರ ಮನೆ ಅಂಗಳ ಸೇರಿದ್ದವು. ಈಗ ಅವುಗಳ ಸಂಖ್ಯೆ ಈಗ ನೂರಕ್ಕೂ ಹೆಚ್ಚು ಅಧಿಕವಾಗಿದೆ. ಇದಕ್ಕೆ ಕಾರಣ ಮರಸಪ್ಪ ಮತ್ತವರ ಕುಟುಂಬದವರು ಗುಬ್ಬಿ ರಕ್ಷಣೆಗೆ ಮಾಡಿರುವ ವ್ಯವಸ್ಥೆ.
ತಮ್ಮ ಮನೆಯ ಸುತ್ತ ಹತ್ತಾರು ಮರಗಳು, ಹೂವಿನ ಗಿಡಗಳು, ಬಳ್ಳಿಗಳನ್ನು ಬೆಳಸಿರುವುದಲ್ಲದೇ, ಗುಬ್ಬಿಗೆ ಬಿದಿರಿನ ಬೊಂಬು, ಮಣ್ಣಿನಿಂದ ಮಾಡಿದ ಕೃತಕ ಗೂಡುಗಳನ್ನು ನೇತು ಹಾಕಿ, ಅವುಗಳಿಗೆ ಆಹಾರ, ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿದ್ದಾರೆ.
ಇನ್ನು ಗುಬ್ಬಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗಿರುವುದು ಅವುಗಳಿಗೆ ಅಗತ್ಯವಾದ ಸಿರಿಧಾನ್ಯವನ್ನು ನೀಡುತ್ತಿರುವುದು. ಇದಕ್ಕಾಗಿ ಮರಸಪ್ಪ ರವಿ ಇವರು ನಿತ್ಯವೂ ನೂರಾರು ರೂ. ವೆಚ್ಚ ಮಾಡುತ್ತಿದ್ದು, ಗುಬ್ಬಿ ಜೊತೆಗೆ ಇತರೆ ಪಕ್ಷಿಗಳು ಇಲ್ಲಿ ವಾಸಿಸಲು ಕಾರಣವಾಗಿ ಅದರಲ್ಲೇ ಅವರು ಸಾರ್ಥಕತೆ ಕಂಡುಕೊಂಡಿದ್ದಾರೆ.
ಇನ್ನು ಗುಬ್ಬಿಗಳ ಬಗ್ಗೆ ಹೇಳುವುದಾದರೆ, ಗುಬ್ಬಚ್ಚಿ-ಗುಬ್ಬಿ (ಪಾಸರ್ ಡೊಮೆಸ್ಟಿಕಸ್) ವಿಶ್ವದೆಲ್ಲೆಡೆ ಕಂಡು ಬರುವ ಪಾಸರೀಡೆ ಕುಟುಂಬಕ್ಕೆ ಪಕ್ಷಿ ಚಿಕ್ಕ ಕೀಟಗಳು ಹಾಗೂ ಕಾಳುಗಳು ಇದರ ಆಹಾರವಾಗಿವೆ.
ಗುಬ್ಬಿ ಸಂತತಿ ಕ್ಷೀಣಿಸಲು ಕಾರಣ?
ಇಂದು ಪರಿಸರ ಹಾಗೂ ಗೂಡು ಕಟ್ಟುವ ತಾಣಗಳ ನಾಶದಿಂದಾಗಿ, ಮೊಬೈಲ್ಗಳು ಹೊರ ಸೂಸುವ ವಿಕಿರಣ, ಶಬ್ದ ಮಾಲಿನ್ಯ ಹಾಗೂ ಮಿತಿ ಮೀರಿದ ಕೀಟನಾಶಕದ ಬಳಕೆಯಿಂದಾಗಿ ಗುಬ್ಬಚ್ಚಿಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿರುವುದು ಪಕ್ಷಿ ತಜ್ಞರ ಕಳವಳಕ್ಕೆ ಕಾರಣವಾಗಿದೆ.
ಹಳ್ಳಿ, ಪಟ್ಟಣಗಳಲ್ಲಿರುವ ಮನೆಯ ಪ್ರಾಂಗಣಗಳಲ್ಲಿ ಮನೆ ಗುಬ್ಬಿಗಳು ಗೂಡು ಕಟ್ಟಿ ಸಂಸಾರ ನಡೆಸುವುದು ಮೊದಲೆಲ್ಲ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಅವುಗಳು ಕಣ್ಮರೆಯಾಗುತ್ತಿವೆ. ಇದು ಪರಿಸರದ ಅವನತಿಯ ಸೂಚಕವಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಮರಸಪ್ಪ ರವಿ. ಹಿಂದೆಲ್ಲ ಧಾನ್ಯಗಳನ್ನು ಸಂತೆಯಿಂದ ತಂದು, ಅದನ್ನು ಸ್ವಚ್ಛಗೊಳಿಸುವಾಗ ಕಾಳುಗಳನ್ನು ಗುಬ್ಬಿಗಳಿಗಾಗಿಯೇ ಮನೆ ಅಂಗಳಗಳಲ್ಲಿ ಬೀರುತ್ತಿದ್ದರು. ಇದರಿಂದ ಅವುಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಆದರೆ, ಈ ಪದ್ಧತಿಗಳು ಇಂದು ಮರೆಯಾಗಿದ್ದು, ಇದರಿಂದ ಗುಬ್ಬಿಗಳ ದನಿ ಮನೆಯಂಗಳದಲ್ಲಿ ಕಾಣದಾಗಿದೆ.
ಐಯುಸಿಎನ್ ವರದಿ ಪ್ರಕಾರ ಕುಸಿದ ಗುಬ್ಬಿ ಸಂತತಿ
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.2010 ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ 71ರಷ್ಟು ಕುಸಿದಿದೆ.
ಗುಬ್ಬಿಗಳ ಗೂಡು ನಾಶ ಮಾಡಬೇಡಿ
ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಗುಬ್ಬಿಗಳು ಮನೆಯಲ್ಲಿ ಗೂಡು ನಿರ್ಮಿಸುವುದು ಸಾಮಾನ್ಯ. ಅದನ್ನು ಅಪಶಕುನವೆಂದು ಗೂಡು ನಾಶ ಮಾಡಬೇಡಿ ಎಂದು ಮರಸಪ್ಪ ರವಿ ಅವರ ನಾಗರೀಕರಲ್ಲಿ ಕಳಕಳಿಯ ಮನವಿ ಮಾಡುತ್ತಾರೆ.
ಗೂಡು ಕಟ್ಟಲು ಗುಬ್ಬಚ್ಚಿಗೆ ಜಾಗವೆಲ್ಲಿ?
ಪ್ರತಿ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಚಿತ್ರಗಳಲ್ಲಿ ಮಾತ್ರ ಅವುಗಳನ್ನು ತೋರಿಸಬೇಕಾದೀತು. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಬಹುಮುಖ್ಯವೆನ್ನುತ್ತಾರೆ.
ಗುಬ್ಬಿಗಳ ಸಂರಕ್ಷಣೆ ಹೀಗೆ ಮಾಡಿ
ಹಿಂದೆ ಪ್ರತಿ ನಿತ್ಯ ದೇವಾಲಯದಲ್ಲಿ ಈ ಗುಬ್ಬಿಗಳ ಚೀಂವ್ ಚೀಂವ್ ಸದ್ದೇ ಸುಪ್ರಭಾತವಾಗಿತ್ತು. ನಂತರ ಅಲ್ಲಿ ಬಿದ್ದ ಅಕ್ಕಿ, ಕಾಳು, ಕಡ್ಡಿ ತರಕಾರಿ ಬೀಜ ತಿನ್ನುತ್ತಾ ಸುತ್ತಲೂ ಹಾರಾಡಿ, ಅಲ್ಲಿ ಬಿದ್ದ ಹೂ ಕಟ್ಟಿದ ದಾರ, ತೆಂಗಿನ ಹಗ್ಗದ ನಾರು, ಕಸ ಕಡ್ಡಿಯನ್ನು ಹಿಡಿದು ಪುರ್ ಎಂದು ಹಾರಿ, ಅದನ್ನು ಯಾವುದೋ ಗುಪ್ತ ಸ್ಥಳದಲ್ಲಿ ಇಟ್ಟು ಬರುವುದು ಅವುಗಳದ್ದು ನಿತ್ಯ ಕಾಯಕ. ಗುಬ್ಬಚ್ಚಿ ಉಳಿವಿಗಾಗಿ ಮನೆಯಂಗಳದಲ್ಲಿ ಹೂತೋಟ ನಿರ್ಮಿಸಿ, ಪುಟ್ಟ ಪೊದೆ ಬೆಳೆಸಬೇಕು. ಅಲ್ಲದೇ, ಹಣ್ಣಿನ ಮರ ಬೆಳೆಸುವುದರ ಜತೆಗೆ ನೀರಿನ ತೊಟ್ಟಿ ನಿರ್ಮಿಸಬೇಕು. ಮನೆ ಅಂಗಳದ ಹಿತ್ತಲಲ್ಲಿ ನೀರುಣಿಕೆ, ಮೇವುಣಿಕೆಗಳನ್ನು ಇಡಬೇಕು ಆಗ ಮಾತ್ರ ಗುಬ್ಬಿಗಳ ಉಳಿವು ಸಾಧ್ಯವೆಂದು ಸಲಹೆ ನೀಡುತ್ತಾರೆ ಮರಸಪ್ಪ.
ಸದಾ ಬ್ಯೂಸಿ, ಅದರೂ ಪರಿಸರ ರಕ್ಷಣೆಯ ತುಡಿತ!
ರಾಮನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತರರೂ ಆಗಿರುವ ಮರಸಪ್ಪ ಪಕ್ಷದ ಚಟುವಟಿಕೆಗಳ ಫೋಟೋಗಳನ್ನು ಮಾಧ್ಗಮಗಳಿಗೆ ಕಳಿಸುವುದರ ಜೊತೆಗೆ ಲಯನ್ಸ್, ರೋಟರಿ ಸೇರಿದಂತೆ ಸಾಮಾಜಿಕ ಸಂಸ್ಥೆಯಲ್ಲಿ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಾ, ಕೊಂಚ ಬಿಡುವು ಸಿಕ್ಕರೆ ಸಾಕು ಹೆಗಲಿಗೆ ಕ್ಯಾಮೆರಾ ನೇತು ಹಾಕಿಕೊಂಡು, ಕಾಡಿನ ಕಡೆ ಪಯಣ ಬೆಳಸುತ್ತಾರೆ. ಅಲ್ಲಿ ಕಾಣುವ ಪಕ್ಷಿಗಳು ಹಾಗೂ ವನ್ಯ ಜೀವಿಗಳ ಚಲನವನ್ಬು ಕಲಾತ್ಮಕವಾಗಿ ಸೆರೆ ಹಿಡಿದು, ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.
ಆ ಪ್ರಾಣಿ ಪಕ್ಷಿಗಳ ವಿಡಿಯೋ ಜೊತೆಗೆ ಅವುಗಳ ಬಗ್ಗೆ ಖಚಿತ ಮಾಹಿತಿಯನ್ನು ಹೇಳುತ್ತಾ ಅದನ್ನು ಯೂಟ್ಯೂಬ್ ಗೆ ಅಫ್ ಲೋಡ್ ಮಾಡಿ, ಸಾರ್ವಜನಿಕರಿಗೆ ಪರಿಸರ, ವನ್ಯಜೀವಿಗಳ ಬಗ್ಗೆ ಮಾಹಿತಿಯನ್ನು ಪಸರಿಸುತ್ತಿದ್ದಾರೆ.