ಡ್ಯಾಂ ಬಿರುಕು ಬಿಟ್ಟಿದೆ ಎನ್ನುವುದು ಸರಿಯಲ್ಲ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಕೆಆರ್ಎಸ್ ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಅಂತಹದ್ದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಎನ್ನುವುದು ಸರಿಯಲ್ಲ ಎಂದು ಸಂಸದೆ ಸುಮಲತಾ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಯಾರು ಕೂಡ ಎಲ್ಲಿಯೂ ಸುಮಲತಾ ಅವರಿಗೆ ಅಡ್ಡಿಪಡಿಸಿಲ್ಲ. ಅವರ ಹೇಳಿಕೆಯನ್ನೇ ಸತ್ಯ ಎಂದು ಬಿಂಬಿಸಬಾರದು. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳಬೇಕು. ರಾಜಕೀಯವಾಗಿ ಯಾರೇ ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ, ಯಾರೂ ಎಲ್ಲಿಯೂ ಅಡ್ಡಿಪಡಿಸಿಲ್ಲ ಎನ್ನುವುದು ಸತ್ಯ. ಇದೊಂದು ರಾಜಕೀಯ ಅಷ್ಟೇ ಎಂದು ಟೀಕಿಸಿದ್ದಾರೆ ಎಂದು ತಿಳಿಸಿದರು.
ಕೆಆರ್ಎಸ್ ಅಧಿಕಾರಿಗಳ ಜತೆಗೂ ನಾನು ಮಾತನಾಡಿದ್ದೇನೆ. ಅಲ್ಲಿಯೂ ಯಾವುದೇ ಸಮಸ್ಯೆ ಇಲ್ಲ ಎಂದು ನನಗೆ ಹೇಳಿದ್ದಾರೆ. ಈ ಹಿಂದೆಯೂ ದಶಪಥ ರಸ್ತೆ ಮಾಡಲು ಬಿಡಲಿಲ್ಲ. ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡಲು ಅಡ್ಡಿಪಡಿಸಿದರು. ಸುಳ್ಳು ನೆಪಗಳನ್ನು ಹೇಳಿ ಕೆಲಸಕ್ಕೆ ತೊಂದರೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.