POLITICS:
ಬೆಂಗಳೂರು: ತೈಲೋತ್ಪನ್ನಗಳು ಮತ್ತು ಅಗತ್ಯ ವಸ್ತುಗಲ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ ಏರಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎತ್ತಿನ ಗಾಡಿಯಲ್ಲೇ ವಿಧಾನಸೌಧಕ್ಕೆ ಬಂದರು.
ಸಿದ್ದರಾಮಯ್ಯ ಸ್ವತಃ ಎತ್ತಿನ ಗಾಡಿ ಓಡಿಸಿದ್ದು ವಿಶೇಷವಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ ಅಲ್ಲದೆ, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಧಾನಸೌಧ ಆವರಣದೊಳಕ್ಕೆ ಎತ್ತಿನ ಗಾಡಿಯಲ್ಲಿ ಪ್ರವೆಶಿಸಲು ಮುಂದಾದಾಗ ತಡೆದ ಪೊಲೀಸರ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಟ್ಟಾದರು. ಒಳಗಡೆ ಬಿಟ್ಟರೆ ಆಕಾಶ ಬಿದ್ದುಹೋಗುತ್ತಾ ಎಂದು ಸಿದ್ದರಾಮಯ್ಯ ಗದರಿದ ಪ್ರಸಂಗವು ನಡೆಯಿತು. ಅವರ ಸಿಟ್ಟಿಗೆ ಮಣಿದ ಪೊಲೀಸರು ಕಡೆಗೆ ಒಳ ಹೋಗಲು ಅವಕಾಶ ಕೊಟ್ಟರು.
ಬಿಜೆಪಿ ಹೇಳುವುದೆಲ್ಲವೂ ಸುಳ್ಳು ಎಂದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಂದಿನಿಂದ ಹತ್ತು ದಿನಗಳ ಕಾಲ ವಿಧಾನಮಂಡಲ ಅಧಿವೆಶನ ನಡೆಯುತ್ತಿದ್ದು, ಜನರ ಕಷ್ಟಗಳ ಬಗ್ಗೆ ಸರ್ಕಾರಕ್ಕೆ ಅರಿವಿರಬೇಕಿದೆ. ಸರ್ಕಾರವನ್ನು ಎಚ್ಚರಿಸಲು ಈ ಪ್ರತಿಭಟನೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.