POLITICS:
ಧಾರವಾಡ: ಉತ್ತರ ಪ್ರದೇಶದಲ್ಲಿ ಲಖೀಂಪುರ ಘಟನೆ ನಡೆಯಬಾರದಾಗಿತ್ತು. ಆದರೆ ನಡೆದಿದೆ, ಈಗ ಅಲ್ಲಿಯ ಸರ್ಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಉತ್ತಮವಾಗಿವೆ. ಆದರೆ ಈ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ನಮ್ಮ ಅನ್ನದಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಸಚಿವ ಅಶ್ವತ್ಥನಾರಾಯಣ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಉತ್ತರ ಪ್ರದೇಶದ ಸರ್ಕಾರ ಲಖೀಂಪುರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ರೈತರು ಸಬಲೀಕರಣ ಆಗಬಾರದು, ಅವರು ಉನ್ನತಿ ಹೊಂದಬಾರದು, ಬಲಿಷ್ಠರಾಗಬಾರದು ಹಾಗೂ ಅಸಹಾಯಕರಾಗಿಯೇ ಇರಬೇಕು ಎನ್ನುವ ಕಲ್ಪನೆಯೊಂದಿಗೆ ರಾಜಕೀಯ ಮಾಡಲಾಗುತ್ತಿದೆ. ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು. ರೈತರ ಶಕ್ತಿ ಹೆಚ್ಚಿಸಲು ಪೂರಕ ಸುಧಾರಣೆಗಳನ್ನ ತಂದು ರೈತ್ತರು ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದೇವೆ. ಆದರೆ ಪ್ರತಿಪಕ್ಷಗಳು ಹಾಗೂ ಕೆಲ ಸಂಘಟನೆಗಳ ಕುತಂತ್ರದಿಂದಾಗಿ ರೈತರ ದಾರಿ ತಪ್ಪಿಸುತ್ತಿವೆ ಎಂದು ತಿಳಿಸಿದರು.
ಇನ್ನೂ ರಾಜ್ಯದಲ್ಲಿ ಉಪಚುನಾವಣೆಯ ಉಸ್ತುವಾರಿ ಪಟ್ಟಿಯಲ್ಲಿ ವಿಜೇಯೇಂದ್ರರ ಹೆಸರನ್ನು ತಡವಾಗಿ ಸೇರಿಸಿದ್ದಕೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ನಮ್ಮ ಪಕ್ಷದವರಾಗಿದ್ದಾರೆ. ಒಬ್ಬರನ್ನು ಕೈ ಬಿಟ್ಟರು, ಇನ್ನೊಬ್ಬರನ್ನು ಸೇರಿದ್ದರು ಅನ್ನುವುದು ಬೇಡಾ. ಪ್ರತ್ಯೇಕವಾಗಿ, ವಿಶೇಷವಾಗಿ ಯಾರ ಮೇಲೂ ಬೆಳಕನ್ನ ಚೆಲ್ಲೋದು ಅಷ್ಟು ಸೂಕ್ತವಲ್ಲ. ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ, ಎಲ್ಲರಿಗೂ ಜವಾಬ್ದಾರಿ ಇದೆ. ಇದಕ್ಕೆ ವಿಶೇಷವಾಗಿ ಬಿಂಬಿಸುವದು ಸರಿಯಲ್ಲ ಎಂದರು.
ಸಿದ್ದರಾಮಯ್ಯಮವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ:
ಸಿದ್ದರಾಮಯ್ಯ ಸರ್ಕಾರ ಬಂದ್ರೆ ಮತ್ತೆ ಜಾತಿಗಣತಿ ಮಾಡಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮತ್ತೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಈಗಾಗಲೇ ಹರಿದು ಹಂಚಿ ಹೋಗಿರುವ ಪಕ್ಷವಾಗಿದೆ. ಪಕ್ಷ ಸಂಘಟಿಸಬೇಕಾದ ಪ್ರಮುಖರೇ, ಸಿಎಂ ಸ್ಥಾನಕ್ಕಾಗಿ ಕಿತ್ತಾಟ ಮಡೆಸುತ್ತಿದ್ದಾರೆ. ನಾನಾ ಸಿಎಂ ಆಗಬೇಕು ಎಂದು ಅವರವಲ್ಲೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಸಿಎಂ ಆಗುವುದಿರಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸು ಮನಸಲ್ಲೂ ಊಹಿಸಲು ಆಗುವುದಿಲ್ಲ. ಕಾಂಗ್ರೆಸ್ ನವರಿಗೆ ಉತ್ತಮ ಆಡಳಿತ ನೀಡಬೇಕು, ಸೇವೆ ನೀಡಬೇಕು ಎಂಬ ಸದುದ್ದೇಶವಿಲ್ಲ. ಕೇವಲ ಗೊಂದಲ ನಿರ್ಮಾಣ ಮಾಡಬೇಕು. ಸಮಾಜವನ್ನು ಒಡೆಯಬೇಕು ಎಂಬ ದುರಾಲೋಚನೆಗಳನ್ನೇ ಹೊಂದಿರುವ ನಾಯಕರಿದ್ದಾರೆ. ಅಷ್ಟೇ ಅಲ್ಲದೆ ಜಾತಿಗಣತಿ ಆಧಾರಿತ ವರದಿ ಸಿದ್ದರಾಮಯ್ಯ ಅಧಿಕಾರ ಅವಧಿಯಲೇ ಬಂದಿತ್ತು. ಅವಾಗ ಸಿದ್ದರಾಮಯ್ಯರವರು ಯಾಕೆ ಸಹಿ ಮಾಡದೇ ಸುಮ್ಮನಿದ್ದರು..?. ಬಾರಿ ಕಥೆ ಹೇಳಿಕೊಂಡು ರಾಜಕಾರಣ ಮಾಡುವುದರಲ್ಲೇ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ನವರು ಕಾಲಹರಣ ಮಾಡುತ್ತಿದ್ದಾರೆ ಎಂದು ಕಾಂಗ್ರಸ್ ನಾಯಕರ ವಿರುದ್ದ ಕಿಡಿಕಾರಿದರು.
ಬೆಲೆ ಏರಿಕೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ:
ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕರು ಬಾರಿ ಬೊಬ್ಬೆ ಹೊಡೆಯುತ್ತಾರೆ. ಎಲ್ಲಾ ಸರ್ಕಾರದ ಅವಧಿಯಲ್ಲೂ ಬೆಲೆ ಏರಿಕೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಕೊರೋನ ಮಹಾಮಾರಿಯಿಂದಾಗಿ ಆರ್ಥಿಕ ವ್ಯವಸ್ಥೆ ದುಸ್ಥಿತಿಗೆ ತಲುಪಿದೆ ಹೀಗಾಗಿ ಬೆಲೆ ಏರಿಕೆ ಆಗಿತ್ತು. ಆದರೆ ಸದ್ಯ ಹಂತ ಹಂತವಾಗಿ ಪ್ರತಿಯೊಂದರ ಬೆಲೆಯೂ ಇಳಿಕೆ ಆಗುತ್ತಿದೆ ಎಂದರು.
ಸದ್ಯ ನಡೆಯುತ್ತಿರುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.