COLUMNS:
ಎಂ ಹೈದರ್
ದಮನಿತ ಸಮುದಾಯಗಳ ಹಕ್ಕುಗಳ ಹೋರಾಟಗಾರ ಜಾರ್ಖಂಡ್ ನ ಆದಿವಾಸಿಗಳ ಹಕ್ಕುಗಳಿಗಾಗಿ ಕಳೆದ 50 ವರ್ಷಗಳಿಂದ ನಿರಂತರವಾಗಿ ಹೋರಾಟದಲ್ಲಿ ತೊಡಗಿಕೊಂಡಿದ್ದ ಫಾದರ್ ಪ್ರಾನ್ ಸ್ಟ್ಯಾನ್ ಸ್ವಾಮಿ (84) ಅವರು ಸರ್ಕಾರದ ವೈದ್ಯಕೀಯ ಚಿಕಿತ್ಸೆಯ ಅಸಮರ್ಪಕತೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಾಣದೆ, ಬಂಧನದಲ್ಲಿದ್ದಾಗಲೆ ನಿನ್ನೆ ನಿಧನ ಹೊಂದಿದ್ದಾರೆ.
ಈ ದೇಶದಲ್ಲಿನ ನಾಗರಿಕ ಹಕ್ಕುಗಳಿಂದ ವಂಚಿತರಾದ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ಪರವಾಗಿ ಮಾನವೀಯತೆಯ ಪರವಾಗಿ ಮಾನವ ಹಕ್ಕುಗಳ ಪರವಾಗಿ ಸತತವಾಗಿ ಹೋರಾಟದಲ್ಲಿ ತೊಡಗಿದ್ದರಿಂದ ಪ್ರಭುತ್ವವು ತನ್ನ ವಿರುದ್ಧದ ಧ್ವನಿಯನ್ನು ಅಡಗಿಸಲು ಎಲ್ಗಾರ್ ಪರಿಷತ್ ಸಭೆಯನ್ನು ನೆಪವಾಗಿಸಿ, 2018ರಲ್ಲಿ 200ನೇ ವರ್ಷದ ಭೀಮಾಕೋರೆಗಾಂವ್ ನ ವಿಜಯೋತ್ಸವದ ಸಂದರ್ಭದಲ್ಲಿ ಪ್ರಭುತ್ವದ ಪಿತೂರಿಯ ಭಾಗವಾಗಿ ನಡೆದ ಗಲಭೆಯ ಪ್ರಕರಣದಲ್ಲಿ 16ನೇ ಆರೋಪಿಯನ್ನಾಗಿಸಿ, ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು, ಆರೋಪಿಸಿ, ಸ್ಟ್ಯಾನ್ ಸ್ವಾಮಿ ಅವರ ಮೇಲೆ UAPA ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
2018ರ ಜನವರಿ 1ರಂದು ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷದ ಸ್ಮರಣಾರ್ಥ ಆಯೋಜಿಸಿದ್ದ ಸಮಾರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಮೇಲ್ಜಾತಿಯ ಜನರ ಗುಂಪಿನಿಂದ ದಲಿತರ ಮೇಲೆ ಹಲ್ಲೆ ನಡೆದಿತ್ತು. ಮಹಾರಾಷ್ಟ್ರದಾದ್ಯಂತ ದಲಿತರು ಎರಡು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ ನಂತರ, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು.
2017ರ ಡಿಸೆಂಬರ್ 30 ರಂದು ನಡೆದ ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಮತ್ತು ಈ ಸಭೆಯಲ್ಲಿ ಪ್ರಧಾನಿಯನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿ, ಸಾಮಾಜಿಕ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ, ವರವರರಾವ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರ ಮೇಲೆ ಪೋಲಿಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ದೇಶದ ವಿರುದ್ಧ ಯುದ್ದ ಸಾರಿದ್ದಾರೆ ಎಂದು ಆರೋಪಿಸಿ ದೇಶ ವಿರೋಧಿ ಕಾನೂನಿನಡಿಯಲ್ಲಿ 2020ರ ಅಕ್ಟೋಬರ್ ನಲ್ಲಿ NIA ಯಿಂದ ಬಂಧಿತರಾದ ಸ್ಟ್ಯಾನ್ ಸ್ವಾಮಿ ಅವರಿಗೆ ತನ್ನ ಇಳಿ ವಯಸ್ಸಿನ ಕಾರಣ ಅವರ ಕೈಗಳು ನಡುಗುತ್ತಿದ್ದರಿಂದ ಲೋಟ ಕೈಯಲ್ಲಿ ಹಿಡಿಯಲು ಸಹ ಆಗುತ್ತಿರಲಿಲ್ಲ, ಆದ್ದರಿಂದ "ನನಗೊಂದು ಸ್ಟ್ರಾ ಅಥವಾ ಸಿಪ್ಪರ್ ಕೊಡಿ ಎಂದು ಅವರು ಕೋರ್ಟ್ ಮೊರೆ ಹೋಗಬೇಕಾಯಿತು.
ಅದನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ಮೂರು ವಾರ ತೆಗೆದುಕೊಂಡಿತು, ಕೋರ್ಟ್ ಅವರಿಗೆ ಸ್ಟ್ರಾ ಹಾಗೂ ಸಿಪ್ಪರ್ ಕೊಡಿ ಎಂದಾಗ NIAಯು ಸ್ಟ್ರಾ, ಮತ್ತು ಸಿಪ್ಪರ್ ನಮ್ಮ ಬಳಿ ಇಲ್ಲ ಎಂದು ಹೇಳಿತು. ಕೊನೆಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟ್ರಾ ಹಾಗೂ ಸಿಪ್ಪರ್ ಖರೀದಿಸಿ NIAಗೆ ಕಳುಹಿಸಿದಾಗ, ಸ್ಟ್ಯಾನ್ ಸ್ವಾಮಿಗೆ ಬಂಧನದ 50 ದಿನಗಳ ಬಳಿಕ ಸಿಪ್ಪರ್ ಕೊಡಲಾಯಿತು, ಬುಡಕಟ್ಟು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಇಷ್ಟೊಂದು ಅಮಾನವೀಯವಾಗಿ ನಡೆಸಿಕೊಂಡ ವ್ಯವಸ್ಥೆ ಈ ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಿಕ್ಕಿಲ್ಲ.
ಫಾದರ್ ಸ್ಟಾನ್ ಸ್ವಾಮಿಯನ್ನು ರಾಂಚಿಯಲ್ಲಿ ಬಂಧಿಸಲಾಗಿತ್ತು. ಪೋಲಿಸರು ಸ್ಟ್ಯಾನ್ ಸ್ವಾಮಿಯನ್ನು ಬಂಧಿಸುವ ಮೊದಲು ಅವರ ಆರೋಗ್ಯ ಸ್ಥಿರವಾಗಿತ್ತು ಆದರೆ ಮುಂಬೈನ ತಲೋಜ ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟಿತು, ಜೈಲಿನಲ್ಲಿ ಅಸಮರ್ಪಕ ಆರೋಗ್ಯ ಸೌಲಭ್ಯಗಳ ಬಗ್ಗೆ ಸ್ವಾಮಿ ಪದೇ ಪದೇ ದೂರು ನೀಡಿದ್ದರು.
ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಸ್ಟಾನ್ ಸ್ವಾಮಿ ಅನಾರೋಗ್ಯದ ಕಾರಣ ತನಗೆ ಜಾಮೀನು ನೀಡಲು ಮನವಿ ಮಾಡಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ಈಗ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ನನಗೆ ಬರೆಯಲು ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾನು ಇದ್ದೇನೆ. ನನಗೆ ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ. ನನಗೆ ಜಾಮೀನು ನೀಡಿ, ಎಂದು ಕೋರಿದ್ದರು. ಆದರೆ ನ್ಯಾಯಾಲಯ ಇದ್ಯಾವುದಕ್ಕೂ ಸೊಪ್ಪು ಹಾಕದೆ ದಿನಾಂಕಗಳನ್ನು ನೀಡುತ್ತಾ ದಿನ ದೂಡಿತ್ತು.
ಪಾರ್ಕಿನ್ಸನ್ ರೋಗ ಬಾಧೆಯಿಂದ ಬಳಲುತಿದ್ದ ಯಾವುದೇ ರೀತಿಯ ಹಿಂಸಾತ್ಮಕ ಪ್ರಕರಣಗಳಲ್ಲಿ ಭಾಗಿಯಾಗದ ಸ್ಟ್ಯಾನ್ ಸ್ವಾಮಿ ಅವರನ್ನು ಮೋದಿ ಸರಕಾರ ನಡೆಸಿಕೊಂಡ ರೀತಿ ನಿಜಕ್ಕೂ ಅಮಾನವೀಯ.
ಪ್ರಭುತ್ವದ ವಿರುದ್ಧ ಬುಡಕಟ್ಟು ಜನರ ಪರವಾಗಿ ದ್ವನಿ ಎತ್ತಿದ್ದಕ್ಕೆ ಕಾರ್ಪೊರೇಟ್ ಒತ್ತಡಕ್ಕೆ ಮಣಿದು ಮತ್ತು ಅವರ ಧರ್ಮದ ಕಾರಣಕ್ಕೆ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟು ಅನಾರೋಗ್ಯದಲ್ಲಿ ಬಳಲುವಂತೆ ಮಾಡಿ ಕ್ಷುದ್ರ ಮನಃಸ್ಥಿತಿಯ ಪ್ರಭುತ್ವವು ಮಾನವೀಯ ಹೋರಾಟದ ದ್ವನಿಯೊಂದನ್ನು ತಣ್ಣಗೆ ಅಡಗಿಸಿತು.