DISTRICT:
ಬೆಂಗಳೂರು: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾತ್ಮಕ ದೃಷ್ಟಿಕೋನ ಅಳವಡಿಸಿಕೊಳ್ಳುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೋ. ಪಿ. ಬಲರಾಂ ಕಿವಿ ಮಾತು ಹೇಳಿದ್ದಾರೆ.
ಜಯನಗರ ನ್ಯಾಷನಲ್ ಕಾಲೇಜಿನ 12ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ನ್ಯಾಷನಲ್ ಕಾಲೇಜನ್ನು ಆರಂಭದಿಂದಲೂ ಕಟ್ಟಿ ಬೆಳೆಸಿದ ಕೀರ್ತಿ ಡಾ.ನರಸಿಂಹಯ್ಯ ಅವರದು. ವಿಜ್ಞಾನದ ಪ್ರೇರಣೆಗಾಗಿಯೇ ಅವರು ತಮ್ಮ ಬದುಕನ್ನು ಮೀಸಲಿಟ್ಟವರು. ಡಾ.ಎಚ್ಚೆನ್ ಅವರ ವೈಚಾರಿಕತೆ, ಸರಳತೆ ಪ್ರಾಮಾಣಿಕತೆ, ಸಂಶೋಧನಾಶೀಲತೆ ಎಂತಹವರಿಗೂ ಒಂದು ಮಾದರಿ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಇದನ್ನು ಅನುಸರಿಸಬೇಕು ಎಂದೂ ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎ.ಹೆಚ್.ರಾಮರಾವ್ ಅವರು ಕಾಲೇಜಿನಲ್ಲಿ ಆರಂಭಿಸಿರುವ ಹೊಸ ಕೋರ್ಸ್ ಗಳ ಕುರಿತು ವಿವರ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ನಾಗರಾಜ ರೆಡ್ಡಿ ಅವರು, ಸಂಸ್ಥೆ ಗ್ರಾಮೀಣ ಪ್ರದೇಶದಲ್ಲೂ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಬದ್ಧತೆಯನ್ನು ತೋರಿದೆ ಎಂದರು.
ಸಮಾರಂಭದಲ್ಲಿ ಪದವಿ ಮತ್ತು ಸ್ನಾತ್ತಕೋತ್ತರ ಕೋರ್ಸ್ ಗಳನ್ನು ಪೂರ್ಣಗೊಳಿಸಿದ 274 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ಅತಿ ಹೆಚ್ಚು ಅಂಕ ಪಡೆದ ಏಳು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಸತ್ಕರಿಸಲಾಯಿತು.
ನೂತನ ಪದವಿಧರರಿಗೆ ಪ್ರಾಂಶುಪಾಲರಾದ ವೈ.ಸಿ.ಕಮಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.