DISTRICT:
ಕಾರವಾರ : ಭಟ್ಕಳ ತಾಲೂಕಿನ ಕುಂಟವಾಣಿಯ ವಿವಾಹಿತ ಮಹಿಳೆಯೊಬ್ಬರಿಗೆ ವರದಕ್ಷಿಣಿ ನೀಡಿಲ್ಲ ಎಂಬ ಉದ್ದೇಶದಿಂದ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ್ದಲ್ಲದೆ ಮಹಿಳೆಗೆ ತೀವ್ರ ತರಹದ ದೈಹಿಕ ಹಲ್ಲೆಯನ್ನು ನಡೆಸಿರುವುದು ಬೆಳಕಿಗೆ ಬಂದಿದ್ದು, ಸದ್ಯ ಮಹಿಳೆಯನ್ನು ಬೆಂಗಳೂರಿನ ಪತಿಯ ಮನೆಯಿಂದ ಭಟ್ಕಳಕ್ಕೆ ಕರೆತಂದು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ವರದಿಯಾಗಿದೆ.
ಭಟ್ಕಳ ತಾಲೂಕಿನ ಕುಂಟವಾಣಿ ನಿವಾಸಿಯಾದ ಸುಧಾ ಗಾಣಿಗ (31) ಎಂಬ ಯುವತಿಯನ್ನು ಕಳೆದ ಆರು ವರ್ಷದ ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರದ ಬಡಕೆರೆಯ ನಿವಾಸಿ ನರಸಿಂಹ ಗಾಣಿಗ ಎಂಬುವವನಿಗೆ ಮದುವೆ ಮಾಡಿಕೊಡಲಾಗಿತ್ತು.ಈ ಯುವತಿಯ ಮನೆಯವರು ತಮ್ಮ ಮಗಳು ದೂರದ ಊರಿನಲ್ಲಿ ತನ್ನ ಗಂಡನೊಂದಿಗೆ ಸುಂದರವಾದ ಜೀವನವನ್ನು ರೂಪಿಸಿಕೊಂಡಿದ್ದಾಳೆ ಎಂದೇ ತಿಳಿದುಕೊಂಡಿದ್ದರು. ಅಲ್ಲದೇ ಇವರಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ.ಮೊದ ಮೊದಲು ಆಕೆಯ ಪತಿ ನರಸಿಂಹ ಗಾಣಿಗ ತನ್ನ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಸುಧಾ ಗಾಣಿಗ ಕೂಡಾ ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡೇ ಹೋಗುತ್ತಿದ್ದಳು.
ಆದರೆ ಎರಡು ವರ್ಷದ ಹಿಂದೆ ಈ ದಂಪತಿಗಳು ಕುಂದಾಪುರದ ಬಡಕೆರೆಯಿಂದ ಬೆಂಗಳೂರಿಗೆ ತೆರಳಿ ಸಂಸಾರ ನಡೆಸಲು ಪ್ರಾರಂಭಿಸಿದರು. ಈ ದಂಪತಿಗಳೊಂದಿಗೆ ನರಸಿಂಹ ಗಾಣಿಗನ ತಂಗಿ ನೇತ್ರಾವತಿ ಗಾಣಿಗ ಮತ್ತು ಆಕೆಯ 12 ವರ್ಷದ ಮಗಳು ವಾಸವಿದ್ದಳು. ನರಸಿಂಹ ಗಾಣಿಗ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದು, ಕೈ ತುಂಬಾ ಸಂಬಳವನ್ನು ಪಡೆಯುತ್ತಿದ್ದನು. ಈತನಿಗೆ ಪಿತ್ರಾರ್ಜಿತ ಆಸ್ತಿಯು ಬಹಳಷ್ಟಿದೆ ಎಂದು ತಿಳಿದು ಬಂದಿದೆ. ಈತನ ಆಸ್ತಿಯ ಮೇಲೆ ಆತನ ತಂಗಿ ನೇತ್ರಾವತಿಯ ಹದ್ದಿನ ಕಣ್ಣು ಬಿದ್ದಿತ್ತು. ಈ ಆಸೆಗಾಗಿ ತನ್ನ ಅಣ್ಣನ ಸಂಸಾರಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದಾಳೆ ಈ ನೇತ್ರಾವತಿ. ತನ್ನ ಅಣ್ಣನ ತಲೆಗೆ ಇಲ್ಲ ಸಲ್ಲದನ್ನು ತುಂಬಿ ಅಣ್ಣನ ಸಂಸಾರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾಳೆ. ಅಲ್ಲದೆ ತನ್ನ ಅಣ್ಣನ ಪತ್ನಿ ಸುಧಾ ಗಾಣಿಗಳನ್ನು ಗೃಹ ಬಂಧನದಲ್ಲಿರಿಸಿ ಸತತ ಆರು ತಿಂಗಳಿಗೂ ಹೆಚ್ಚು ಕಾಲ ಆಕೆಯ ಮೇಲೆ ಮಾರಣಾಂತಕ ಹಲ್ಲೆ, ಚಿತ್ರ ಹಿಂಸೆ ನೀಡಿದ್ದಲ್ಲದೆ ಆಕೆಯ ತಾಯಿ ಮನೆಗೆ ಈ ವಿಚಾರ ತಿಳಿಯದಂತೆ, ಅವರ ಸಂಪರ್ಕಕ್ಕೂ ಸಿಗದಂತೆ ಮಹಿಳೆಯ ಮೊಬೈಲ್ ಅನ್ನು ಕಸಿದುಕೊಂಡಿದ್ದಾಳೆ.
ಪತಿ ನರಸಿಂಹ ಗಾಣಿಗ ತನ್ನ ಕಣ್ಣೆದುರಲ್ಲೇ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರೂ ತನ್ನ ತಂಗಿಯ ಕುಕೃತ್ಯಕ್ಕೆ ವಿರೋಧ ವ್ಯಕ್ತಪಡಿಸದೆ ಮೌನಕ್ಕೆ ಶರಣಾಗಿದ್ದನು. ತಂಗಿಯ ಕಾನೂನು ಬಾಹಿರ ಕೆಲಸಕ್ಕೆ ಪರೋಕ್ಷವಾಗಿ ಬೆಂಬಲವನ್ನು ನೀಡಿದ್ದಾನೆ. ಇಷ್ಟೇ ಅಲ್ಲದೆ ಸುಧಾ ಗಾಣಿಗಳ ಹಿರಿಯ ಮಗಳಿಗೆ ಕೆಲವು ಮಾತ್ರೆಗಳನ್ನು ನೀಡಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವ ಅಮಾನವೀಯ ಕೆಲಸವನ್ನು ಸಹ ಈ ನೇತ್ರಾವತಿ ಗಾಣಿಗ ಮಾಡಿರುತ್ತಾಳೆ. ಮಹಿಳೆಯ ಅದೃಷ್ಟವೋ ಎಂಬಂತೆ ತೀವ್ರ ಅಸ್ವಸ್ಥಗೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಸುಧಾ ಗಾಣಿಗ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ಆಕೆಯನ್ನು ಕಂಡ ಅಕ್ಕಪಕ್ಕದ ಮನೆಯವರು ಅಲ್ಲಿಯೇ ಇದ್ದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೃಷ್ಟವಶಾತ್ ಸಿಬ್ಬಂದಿ ಒಬ್ಬರು ಸುಧಾ ಗಾಣಿಗ ಅವರ ಅಣ್ಣನ ಪತ್ನಿಗೆ ಹಲ್ಲೆಗೊಳಗಾದ ಈಕೆಯ ಫೋಟೋವನ್ನು ಕಳಿಸಿದ್ದಾರೆ. ತಕ್ಷಣ ದೂರದ ಸಂಬಂಧಿಯಾದ ಬೈಂದೂರಿನ ನಾಗೇಂದ್ರ ಗಾಣಿಗ ಹಾಗೂ ಮಹಿಳೆಯ ತಾಯಿ ಬೆಂಗಳೂರಿನ ಸರಕಾರಿ ಆಸ್ಪತ್ರೆಗೆ ತೆರಳಿ ಸುಧಾ ಗಾಣಿಗರ ಆರೈಕೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಪೋಲಿಸ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ.
ಸದ್ಯ ತನಿಖೆ ನಡೆಸಿದ ಪೋಲಿಸರು ಮಹಿಳೆಯ ಪತಿ ನರಸಿಂಹ ಗಾಣಿಗ ಹಾಗೂ ಆತನ ತಂಗಿ ನೇತ್ರಾವತಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದ್ದಾರೆ. ಸುಧಾ ಗಾಣಿಗ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.