DISTRICT:
ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ,ಪರಿಸರ ಪ್ರೇಮಿ ಮಹಾದೇವ ವೇಳಿಪ (90) ಅವರು ಇಂದು ನಿಧನ ಹೊಂದಿದರು.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ಅವರು ಜಾನಪದ ಕಲೆ, ಪರಿಸರ ಸಂರಕ್ಷಣೆಗೆ ಜಾನಪದ ಪ್ರಶಸ್ತಿ ಹಾಗೂ ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ನೂರಾರು ಬಗೆಯ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳಸುವ ಜೊತೆಗೆ ಅರಣ್ಯ ಸಂರಕ್ಷಣೆ ಸಹ ಮಾಡಿದ್ದರು. ಮಹಾದೇವ ವೇಳಿಪ ಅವರು ಜಾನಪದ ಹಾಡುಗಳನ್ನು ಸಾವಿರ ಲೆಕ್ಕದಲ್ಲಿ ನಿರಂತರವಾಗಿ ಹಾಡುತ್ತಿದ್ದರು. ನಾಟಿ ವೈದ್ಯರೂ ಆಗಿದ್ದ ಅವರ ಸರಳ ಸಜ್ಜನಿಕೆ ಎಲ್ಲರ ಗಮನ ಸೆಳೆಯುತ್ತಿತ್ತು.ಕಳೆದ ಎರಡು ದಿನದಿಂದ ಅನಾರೋಗ್ಯ ಪೀಡಿತರಾಗಿದ್ದ ಮಹಾದೇವ ವೇಳಿಪ ಅವರು ಇಂದು ನಿಧನರಾಗಿದ್ದಾರೆ.