DISTRICT:
ಬೆಂಗಳೂರು: ಶಿಕ್ಷಣ ಇಲಾಖೆಯು ಒಂದಲ್ಲಾ ಒಂದು ರೀತಿಯಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತಿದ್ದು, ಹಿಜಾಬ್ , ಭಗವದ್ಗೀತೆ , ನಂತರ ಇದೀಗ ಧ್ಯಾನದ ವಿಚಾರವಾಗಿ ವಿವಾದ ಎದ್ದಿದೆ. ವಿರೋಧ ಪಕ್ಷಗಳು ಹಾಗೂ ಕೆಲವೊಂದು ಮುಸ್ಲಿಂ ಮುಖಂಡರ ಟೀಕೆಗಳ ನಡುವೆಯೂ ಶಿಕ್ಷಣ ಇಲಾಖೆ ತಾನು ಜಾರಿಗೊಳಿಸಲು ಯೋಚಿಸುತ್ತಿರುವ ಧ್ಯಾನ ಪಾಠಕ್ಕೆ ಶತಾಯ ಗತಾಯ ಸಜ್ಜಾಗುತ್ತಿದೆ. ಯಾವುದೇ ಟೀಕೆಗಳಿಗೂ ಜಗ್ಗದೆ ಶಾಲಾ ಮಕ್ಕಳಿಗೆ ಧ್ಯಾನ ಕಲಿಸಿಕೊಡಲು ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದು, ಮುಂದಿನ ತಿಂಗಳಿನಿಂದಲೇ ಧ್ಯಾನ ಪಾಠ ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ತಾನು ಚಿಂತನೆ ನಡೆಸಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಕಲಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಪತಂಜಲಿ ಮತ್ತು ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗೂರೂಜಿ ಮೊರೆ ಹೋಗಲು ಯೋಜಿಸಿದೆ. ರವಿಶಂಕರ್ ಗೂರೂಜಿ ಸೇರಿದಂತೆ ಪತಂಜಲಿ ಯೋಗ ಪರಿಣತರ ಸಲಹೆ ಪಡೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಮಕ್ಕಳಿಗೆ ಯಾವ ರೀತಿಯ ಧ್ಯಾನ ಹೇಳಿಕೊಡಬೇಕು? ಎಷ್ಟು ಹೊತ್ತು ಧ್ಯಾನ ಮಾಡಿಸಬೇಕು ಎಂಬುದರ ಬಗ್ಗೆ ಸಲಹೆ ಪಡೆಯಲು ನಿರ್ಧಾರ ಮಾಡಿಕೊಂಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳು ಮುಂದಿನ ವಾರದಿಂದ ನಡೆಸಲು ಚಿಂತನೆ ನಡೆಸಲಾಗಿದೆ.