DISTRICT:
ವಿಜಯಪುರ: ಕರ್ನಾಟಕದಲ್ಲಿ ಕಳೆದ ಒಂದು ವರ್ಷಕ್ಕಿಂತ ಆಧಿಕ ಸಮಯದಿಂದ ಕೋಮುಸೌಹಾರ್ಧತೆಗೆ ಧಕ್ಕೆ ತರೋ ಘಟನೆಗಳು ನಡೆಯುತ್ತಾ ಬಂದಿವೆ.
ಹಿಜಾಬ್, ಜಟ್ಕಾ ಕಟ್ ಹಲಾಲ್ ಕಟ್, ಹಿಂದೂ ದೇವಸ್ಥಾನಗಳ ಮುಂದೆ ಮುಸ್ಲಿಂ ವ್ಯಾಪಾರಸ್ಥರು ವ್ಯಾಪಾರ ಮಾಡಲು ತಡೆ, ಹಿಂದೂ ಯುವಕರ ಹತ್ಯೆ ಮುಸ್ಲಿಂ ಯುವಕರ ಹತ್ಯೆಯಂಥ ಘಟನೆಗಳು ನಡೆದಿವೆ. ಇಷ್ಟರ ಮಧ್ಯೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಲು ಮುಸ್ಲಿಂ ವ್ಯಕ್ತಿಯೋರ್ವ ಹನುಮ ಮಲಾ ಧಾರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಕೋಮು ಸೌಹಾರ್ಧತೆ ಮೆರೆದಿದ್ಧಾರೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಹಿ ಗ್ರಾಮದ ಜಾಪರ್ ಬೆಣ್ಣಿ ಎಂಬ ವ್ಯಕ್ತಿ ಹನುಮ ಮಾಲಾ ಧರಿಸಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ. ನೆರೆಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಆಂಜನೇಯನ ಹನುಮ ಮಾಲಾ ವೃತಾಚರಣೆ ಮಾಡುವ ಮೂಲಕ ಸೋದರತೆಯನ್ನು ಸಾರಿದ್ದಾರೆ. ಹಣೆಗೆ ಗಂಧ ಇರಿಸಿ, ತಿಲಕ ಹಚ್ಚಿಕೊಂಡು, ಕೇಸರಿ ವಸ್ತ್ರ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್ ಬೆಣ್ಣಿ ಇಂದು ನಮಗೆಲ್ಲಾ ಮಾದರಿಯಾಗಿದ್ದಾರೆ.
ಹನುಮ ಮಾಲಾ ವೃತಾಚರಣೆ ಅಂಗವಾಗಿ ಜಾಫರ್ ಬೆಣ್ಣಿ ಅವರು ನಿತ್ಯ ಹಿಂದೂ ದೇವಾಲಯದ ಪೂಜೆಗಳಲ್ಲಿ ಭಾಗಿಯಾಗಿ, ದೇವರ ಸ್ತುತಿಗಳನ್ನು ಹಾಡುತ್ತಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೊರಟಿರೋ ಜಾಫರ್ ಅವರು ಅಂಜನಾದ್ರಿ ಬೆಟ್ಟದಲ್ಲಿ ಹನುಮದೇವನಿಗೆ ಪೂಜೆ ಸಲ್ಲಿಸಿ ಹನುಮ ಮಾಲಾಧಾರ ವೃತ ಮುಕ್ತಾಯ ಮಾಡೋದಾಗಿ ಮಾಹಿತಿ ನೀಡಿದ್ದಾರೆ. ಬಸವನಾಡಿನಲ್ಲಿ ಐಕ್ಯತೆ ಸಾರಿರೋ ಜಾಫರ್ ಅವರ ನಡೆಗೆ ಹಿಂದೂ ಮುಸ್ಲಿಂ ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿದಿದ್ದಾರೆ.