DISTRICT:
ತುಮಕೂರು: ಗ್ರಾಮಕ್ಕೆ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ, ದಯವಿಟ್ಟು ರಸ್ತೆ ಮಾಡಿಸಿ ಅಂತ ಆ ಯುವಕ ಕೇಳಿದ್ದೇ ತಡ. ಅದೆಲ್ಲಿತ್ತೋ ಕೋಪ, ಶಾಸಕ ವೆಂಕಟರಮಣಪ್ಪ ಇದ್ದಕ್ಕಿದ್ದಂತೆ ಹುಡುಗನ ಮೇಲೆ ಕೈ ಮಾಡಿಯೇ ಬಿಟ್ಟರು. ಇಂತಹದ್ದೊಂದು ಘಟನೆ ನಡೆದಿದ್ದು, ಇದೀಗ ಪಾವಗಡ ಶಾಸಕ ವೆಂಕಟರಮಣಪ್ಪ ಆ ಹುಡುಗನ ಮೇಲೆ ಕೈ ಮಾಡಿರುವ ವಿಡಿಯೋ ವೈರಲ್ ಆಗಿದೆ.
ತುಮಕೂರು ಜಿಲ್ಲೆ ಪಾವಗಡದ ತಾಲೂಕು ಕಛೇರಿ ಬಳಿ ಈ ಘಟನೆ ನಡೆದಿದೆ. ಕಾರಿನತ್ತ ಬರುತ್ತಿದ್ದ ಶಾಸಕರನ್ನ ಆ ಹುಡುಗ ತಮ್ಮ ಗ್ರಾಮಕ್ಕೆ ಕುಡಿಯುವ ನೀರಿಲ್ಲ, ರಸ್ತೆ ಸರಿ ಇಲ್ಲ, ಮಾಡಿಸಿ ಅಂದಿದ್ದೇ ಶಾಸಕರ ಕೋಪ ನೆತ್ತಿಗೇರಿದೆ. ಏಕಾಏಕಿ ಆ ಹುಡುಗನ ಕೆನ್ನೆಗೆ ಹೊಡೆದು ಪೊಲೀಸ್ ಸ್ಟೇಷನ್ಗೆ ಹಾಕಿಸಿ ಬಿಡ್ತೀನಿ ಅಂತ ಅವಾಜ್ ಹಾಕಿದ್ದಾರೆ. ಇಷ್ಟಕ್ಕೂ ಆತ ಕೇಳಬಾರದ್ದನ್ನು ಏನು ಕೇಳಿದ ಅಂತ ಶಾಸಕರಿಗೆ ಕೋಪ ಬಂತೋ ಗೊತ್ತಿಲ್ಲ. ಅಲ್ಲಿ ನೂರಾರು ಜನ ನಿಂತಿದ್ದು, ಆ ಹುಡುಗನ ಕೆನ್ನೆಗೆ ಬಾರಿಸಿದರೂ ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾಂಗ್ರೆಸ್ ಪಕ್ಷ ಬೇರೆಯವರ ರಾಜೀನಾಮೆಗೆ ಪಟ್ಟು ಹಿಡಿದು ಕೂರುವಂತೆ ತಮ್ಮದೇ ಪಕ್ಷದ ಶಾಸಕ ತಪ್ಪು ಮಾಡಿದ್ದು, ಯಾವ ರೀತಿಯ ಕ್ರಮ ಕೈಗೊಳ್ತಾರೆ ಕಾದು ನೋಡಬೇಕು.