SPORTS:
ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ಅರ್ಹತೆಗಾಗಿ ನಡೆಯುತ್ತಿದ್ದ ಟೂರ್ನಿಯ ವೇಳೆ ಪಂದ್ಯವೊಂದನ್ನು ಕೈ ಚೆಲ್ಲುವಂತೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಕೇಳಿಕೊಂಡಿದ್ದಾರೆ ಎಂದು ಟೇಬಲ್ ಟೆನಿಸ್ ಆಟಗಾರ್ತಿ ಒಲಿಂಪಿಯನ್ ಮನಿಕಾ ಬಾತ್ರಾ ಆರೋಪಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಅವರ ನೆರವನ್ನು ತಿರಸ್ಕರಿಸಿರುವುದಕ್ಕೆ ಕಾರಣ ಕೇಳಿ ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಮನಿಕಾ ಬಾತ್ರಾ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರ ನೀಡುವಾಗ ಮನಿಕಾ ಅವರು ಈ ಅಂಶವನ್ನು ಬಯಲಿಗೆಳೆದಿದ್ದಾರೆ.
ಒಂದು ತಿಂಗಳ ಹಿಂದೆ ನನ್ನಲ್ಲಿ ಮ್ಯಾಚ್ ಕೈಚೆಲ್ಲು ಎಂದು ಹೇಳಿದ ವ್ಯಕ್ತಿ ಪಂದ್ಯದ ವೇಳೆ ನನ್ನೆದುರು ಕುಳಿತು ಸಲಹೆ ನೀಡುವುದು ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿಯೇ ಅವರ ನೆರವನ್ನು ಟೋಕಿಯೋ ದಲ್ಲಿ ತಿರಸ್ಕರಿಸಿದೆ ಎಂದಿದ್ದಾರೆ.
"ದೋಹಾದಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದ ವೇಳೆ ಪಂದ್ಯವನ್ನು ಕೈಚೆಲ್ಲಿ ತನ್ನ ವಿದ್ಯಾರ್ಥಿಗೆ ಅವಕಾಶ ಸಿಗಲು ನೆರವಾಗುವಂತೆ ಕೇಳಿಕೊಂಡಿದ್ದರು. ಅಂದರೆ ಮ್ಯಾಚ್ ಫಿಕ್ಸಿಂಗ್ ಮಾಡಲು ಕೇಳಿದ್ದರು," ಎಂದು ಬಾತ್ರಾ ಆರೋಪಿಸಿದ್ದಾರೆ.
"ಈ ಬಗ್ಗೆ ನನ್ನಲ್ಲಿ ಸೂಕ್ತ ದಾಖಲೆಗಳಿವೆ. ಸಮಯ ಬಂದಾಗ ಸಂಬಂಧಪಟ್ಟವರಿಗೆ ಸಲ್ಲಿಸಲಿದ್ದೇನೆ. ಯಾರಿಗಾಗಿ ಪಂದ್ಯ ಕೈ ಚೆಲ್ಲಬೇಕಾಗಿತ್ತೋ ಆ ವಿದ್ಯಾರ್ಥಿನಿಯೊಂದಿಗೆ ನಾನು ತಂಗಿದ್ದ ಹೊಟೇಲ್ ಗೆ ಬಂದು 20 ನಿಮಿಷಗಳ ಕಾಲ ರಾಯ್ ಮಾತನಾಡಿದ್ದಾರೆ. ಈ ಘಟನೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಆಟದ ಮೇಲೂ ಕೂಡ. ದೇಶಕ್ಕಾಗಿ ಆಡುವಾಗ ಅದೆಲ್ಲವನ್ನೂ ಬದಿಗಿಟ್ಡು ಆಡಿದ್ದೇನೆ.," ಎಂದು ಮನಿಕಾ ಬಾತ್ರ ಹೇಳಿದ್ದಾರೆ.